ಮೂಡುಬಿದಿರೆ, ಅ. 13 (DaijiworldNews/PY): ಇಲ್ಲಿನ ಕರಿಂಜೆ ಬಳಿ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮೂಡುಬಿದಿರೆ ಠಾಣಾ ಪೊಲೀಸರು ಅ.12ರ ಸೋಮವಾರ ಬಂಧಿಸಿದ್ದಾರೆ.
ಕರಿಂಜೆ ಗ್ರಾಮದ ನೀರಳಿಕೆ ಬಳಿ ಆಟೋ ರಿಕ್ಷಾವೊಂದರಲ್ಲಿ ಬದ್ರುದ್ದೀನ್ ಎಂಬ ವ್ಯಕ್ತಿ ಕುಳಿತಿದ್ದ. ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಹೋದ ಮೂಡುಬಿದಿರೆ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆಟೋ ರಿಕ್ಷಾದಲ್ಲಿ ಪೈಂಟ್ ಬಕೆಟ್ನ ಒಳಗಡೆ ಒಂದೊಂದು ಕೆ.ಜಿ ತೂಕವಿರುವ ಎಂಟು ಪ್ಲಾಸ್ಟಿಕ್ ಚೀಲ ಇರುವುದು ಕಂಡುಬಂದಿದೆ.
ಆರೋಪಿಯಿಂದ ಆಟೋರಿಕ್ಷಾ, ಮಾಂಸ ಮಾರಾಟದಿಂದ ಬಂದ 17,500 ರೂ. ನಗದು, 2,0000 ರೂ. ಮೌಲ್ಯದ ಗೋಮಾಂಸ ಮತ್ತು ಆತನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅ.11ರ ಭಾನುವಾರ ಮುಂಜಾನೆ ಮೂಡು ಕೊಣಾಜೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಆರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದು, ಇನ್ನೊಂದು ವಾಹನದಲ್ಲಿ ಏಳು ಮಂದಿ ಪರಾರಿಯಾದ ಘಟನೆಯ ಬಳಿಕ ಕರಿಂಜೆಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.