ಕಾರ್ಕಳ, ಅ. 10 (DaijiworldNews/MB) : ಬದುಕಿನ ಮೇಲೆ ಚೆಲ್ಲಾಟವಾಡುವ ಹೊಸ ಯೋಜನೆ ಅನುಷ್ಠಾನಗೊಳ್ಳುವ ಅಗತ್ಯತೆ ನಾಗರಿಕರಿಗೆ ಇಲ್ಲ. ಸರ್ವೇ ಕಾರ್ಯದಲ್ಲಿ ನಡೆಸಿದ ಜಾಗದಲ್ಲಿ ಏತ ನೀರಾವರಿ ಯೋಜನೆ ಕಾಮಗಾರಿ ನಡೆಯದೇ ಹೋದುದರಿಂದ ಎಣ್ಣೆಹೊಳೆ ಪರಿಸರದಲ್ಲಿ ತಲಾ ತಲಾಂತರ ವರ್ಷಗಳಿಂದ ಬದುಕುತ್ತಿದ್ದವರ ಅಸಂಖ್ಯಾತ ಕುಟುಂಬಗಳು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದೆ. ಸರಕಾರ ಬಿಡುಗಡೆಗೊಳಿಸಿದ ರೂ.108 ಕೋಟಿ ಜನ ಸಾಮಾನ್ಯರು ಪಾವತಿಸಿದ ತೆರಿಗೆಯ ಹಣವಾಗಿದೆ. ಅದನ್ನು ಸಮರ್ಪಕವಾಗಿ ಬಳಕೆಯಾಗುದಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.
ಎಣ್ಣೆಹೊಳೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಅವ್ಶೆಜ್ಞಾನಿಕ ಏತನೀರಾವರಿ ಯೋಜನೆಯ ವಿರುದ್ಧ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿರುವ ಜಾಗದಿಂದ ಹೊರಟ ಮೆರವಣೆಗೆಯು ಎಣ್ಣೆಹೊಳೆಯವರೆಗೆ ಸಾಗಿ ಬಂತು. ನೂರಾರು ಕಾರ್ಯಕರ್ತರು ಹಾಗೂ ಗ್ರಾ ಮಸ್ಥರು ಪಾಲ್ಗೊಂಡಿದ್ದರು.
ಯುವ ಕಾಂಗ್ರೆಸ್ ಮುಖಂಡ ಶುಭದರಾವ್ ಮಾತನಾಡಿ, ಸರಕಾರವು ಏತ ನೀರಾವರಿ ಯೋಜನೆಗೆ ರೂ.108 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಅಣೆಕಟ್ಟಿಗೆ ಉಪಯೋಗಿಸಬೇಕಾದ ಸಿಮೆಂಟ್ ಯಾರ್ಯಾರ ಪಾಲಾಗಿದೆ. ಕಣ್ಣಿದ್ದರೂ ಕುಡುಡರಂತಾಗಿದ್ದಾರೆ ಸಂಬಂಧ ಪಟ್ಟವರು. ಅಭಿವೃದ್ಧಿಯ ಹೆಸರಿನಲ್ಲಿ ಕಮಿಷನ್ ದಂಧೆ ನಿರಂತರವಾಗಿ ನಡೆಯುತ್ತಾ ಬಂದಿರುವುದರಿಂದ ನಡೆದಿರುವ ಕಾಮಗಾರಿಗಳೆಲ್ಲವೂ ಅರೆಬರೆಯಾಗಿದೆ. ಅಭಿವೃದ್ಧಿ ಎಂಬುವುದೇ ಮರಿಚಿಗೆಯಾಗಿ ಉಳಿದಿದೆ. ಯೋಜನೆಯನ್ನು ಸ್ವಾರ್ಥಕ್ಕಾಗಿ ಅನುಷ್ಠಾನಗೊಳಿಸದೇ ಜನಪರವಾಗಿರಬೇಕೆಂದರು.
ಕಾರ್ಕಳ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಜೆಕಾರು ಡಾ. ಸಂತೋಷ್ ಕುಮಾರ್ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಪ್ರಭಾಕರ ಬಂಗೇರಾ, ದೀಪಕ್ ಕೋಟ್ಯಾನ್, ರಾಘವ ಕೋಟ್ಯಾನ್, ರವಿಶಂಕರ್ ಶೇರಿಗಾರ್, ಸುಜಾತ ಆಚಾರ್ಯ, ಶಶಿಕಲಾ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.