ಉಡುಪಿ, ಅ. 07 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಕ್ರಶರ್ ಉದ್ಯಮಿಗಳ ಜೊತೆ ಕೈ ಜೋಡಿಸಿ, ಭ್ರಷ್ಟಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿರುವ ಉಡುಪಿ ಹಿರಿಯ ಗಣಿ ಇಲಾಖೆಯ ಅಧಿಕಾರಿ ರಾಂಜಿ ನಾಯಕ್ ಉಡುಪಿಯಿಂದ ವರ್ಗಾವಣೆಗೊಂಡಿದ್ದಾರೆ. ಕಳೆದ 28 ರಂದು ಉಡುಪಿಯಿಂದ ವರ್ಗಾವಣೆಗೊಂಡು ಶಿವಮೊಗ್ಗದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮಧ್ಯೆ ಸೋಮವಾರದಂದು ಉಡುಪಿ ಕ್ರಶರ್ ಮಾಲೀಕರು ಹಾಗೂ ಮರಳು ಮಾಫಿಯಾದಲ್ಲಿ ತೊಡಗಿಕೊಂಡಿದ್ದ ಹಲವರು ರಾಂಜಿ ನಾಯಕ್ಗೆ ಉಡುಪಿಯ ಐಶಾರಾಮಿ ಹೊಟೇಲೊಂದರಲ್ಲಿ ಭರ್ಜರಿ ಬಾಡೂಟ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಉಡುಪಿಯ ಹಲವು ಕ್ರಶರ್ ಮಾಲೀಕರು ಹಾಗೂ ಮರಳು ಧಂಧೆಕೋರರು ಭಾಗಿಯಾಗಿದ್ದರು.
ಇನ್ನೂ ಅಶ್ಚರ್ಯಕರ ವಿಚಾರವೇನಂದರೆ ಈ ಪಾರ್ಟಿಯಲ್ಲಿ ಗಣಿ ಇಲಾಖೆಯ ಹಲವು ಸರಕಾರಿ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಸರಕಾರಿ ಜೀಪಿನಲ್ಲೇ ಬಂದು ಕ್ರಶರ್ ಮಾಲೀಕರು ಏರ್ಪಡಿಸಿದ ಪಾರ್ಟಿಯಲ್ಲಿ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಹಾಗೂ ಭ್ರಷ್ಟಚಾರ ನಿಗ್ರಹ ತಂಡಕ್ಕೆ ವಿಡಿಯೋ ದಾಖಲೀಕರಣ ಸಹಿತ ಮಾಹಿತಿಗಳನ್ನು ನೀಡಿದ್ದಾರೆ. ಆದರೆ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.
ಉಡುಪಿಯಲ್ಲಿ ರಾಂಜೀ ನಾಯಕ್ ಕಾರ್ಯನಿರ್ವಹಿಸಿದ ಸಂಧರ್ಭ ಅಕ್ರಮ ಮರಳುಗಾರಿಕೆಗೆ ಸ್ವತಃ ಬೆಂಬಲ ನೀಡಿದ್ದರು. ಅಷ್ಟೇ ಅಲ್ಲದೇ ಕಾನೂನು ಉಲ್ಲಂಘಿಸಿ ನಡೆಯುತ್ತಿದ್ದ ಕ್ರಶರ್ಗಳಿಗೆ ರತ್ನ ಗಂಬಳಿ ಹಾಕಿ ಕೊಟ್ಟಿದ್ದರು. ಡೀಮ್ಡ್ ಫಾರೆಸ್ಟ್ನಲ್ಲಿ ಸ್ಥಗಿತಗೊಂಡಿದ್ದ ಅಕ್ರಮ ಕ್ರಶರ್ಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದು ಮರು ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದರ ಋಣಸಂದಾಯಕ್ಕಾಗಿ ಕ್ರಶರ್ ಹಾಗೂ ಅಕ್ರಮ ಮರಳು ದಂಧೆಕೋರರು ರಾಂಜೀ ನಾಯಕ್ಗೆ ಐಶರಾಮಿ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ನೀಡಿ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ನೀಡಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ.
ಉಡುಪಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಸ್ವರ್ಣ ನದಿಯಲ್ಲಿ ಅಕ್ರಮ ಮರಳು ಗಾರಿಕೆಯಲ್ಲಿ ಇದೇ ಅಧಿಕಾರಿ ಪ್ರಮುಖ ಪಾತ್ರವಹಿಸಿದ್ದರು. ಸ್ಥಳೀಯ ರಾಜಾಕಾರಣಿಗಳೊಂದಿಗೆ ಕೈಜೋಡಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮರಳು ಸಾಗಾಟ ನಡೆಸಿದರು, ಸಾರ್ವಜನಿಕರು ದೂರು ನೀಡಿದ ಬಳಿಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳುಗಾರಿಕೆ ಪತ್ತೆ ಹಚ್ಚಿದ್ದರು.
ಈ ಪ್ರಕರಣದಲ್ಲಿ ಇದೇ ಗಣಿ ಅಧಿಕಾರಿ ಮೇಲೆ ದೂರು ದಾಖಲಾಗಿದೆ. ಇನ್ನೂ ಅಕ್ರಮ ಕ್ರಶರ್ ಹಾಗೂ ಗಣಿಗಳಿಗೆ ಅನುಮತಿ ನೀಡಿದ ಸಂಬಂಧ ಭ್ರಷ್ಟಚಾರ ನಿಗ್ರಹ ತಂಡದಲ್ಲೂ ರಾಂಜಿನಾಯಕ್ ಮೇಲೆ ಸಾರ್ವಜನಿಕರು ದೂರುಗಳು ನೀಡಿದ್ದು ವಿಚಾರಣೆ ಹಂತದಲ್ಲಿದೆ.
ಉಡುಪಿ ಜಿಲ್ಲೆಯಿಂದ ಹಲವು ದೂರುಗಳು ಸರಕಾರಕ್ಕೆ ಸಲ್ಲಿಕೆಯಾದ ಹಿನ್ನಲೆಯಲ್ಲಿ ಸರಕಾರ ಭ್ರಷ್ಟ ಅಧಿಕಾರಿಯನ್ನು ವರ್ಗಾವಣೆಗೊಳಿಸಿತ್ತು. ಅದರೆ ಇತನೊಂದಿಗೆ ಭ್ರಷ್ಟಚಾರದಲ್ಲಿ ಪಾಲ್ಗೊಂಡಿದ್ದ ಇತರ ಅಧಿಕಾರಿಗಳು ಇನ್ನೂ ಉಡುಪಿಯಲ್ಲೇ ಬಾಕಿಯಾಗಿದ್ದು, ಈ ಎಲ್ಲಾ ಅಧಿಕಾರಿಗಳು ಸೋಮವಾರ ನಡೆದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.
ಸರಕಾರಿ ಅಧಿಕಾರಿಗಳು ಅಕ್ರಮ ದಂಧೆಕೋರರ ಜೊತೆ ಬಹಿರಂಗವಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭ್ರಷ್ಟ ಅಧಿಕಾರಿಗಳ ಮೇಲೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.