ಮಂಗಳೂರು, ಅ. 01 (DaijiworldNews/MB) : ವೆಂಕಟರಮಣ ದೇವಸ್ಥಾನ ಜಂಕ್ಷನ್ನಿಂದ ಬಾಲಾಜಿ ಜಂಕ್ಷನ್ವರೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದರಿಂದ, ತಾತ್ಕಾಲಿಕವಾಗಿ ಅಕ್ಟೋಬರ್ 1 ರಿಂದ ನವೆಂಬರ್ 29 ರವರೆಗೆ ಅಂದರೆ 40 ದಿನಗಳವರೆಗೆ ವಾಹನ ಸಂಚಾರದಲ್ಲಿ ಬದಲಾವಣೆಗೆ ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಶ್ ತಿಳಿಸಿದ್ದಾರೆ.
ಸ್ಟೇಟ್ಬ್ಯಾಂಕ್, ರಥಬೀದಿ, ಕುದ್ರೋಳಿ, ಮಣ್ಣಗುಡ್ಡ ಮಾರ್ಗದಲ್ಲಿ ಚಲಿಸುವ ಬಸ್ಸುಗಳು ಕ್ಲಾಕ್ ಟವರ್, ಹಂಪನಕಟ್ಟೆ, ಕೆಎಸ್ ರಾವ್ ರಸ್ತೆ, ನವಭಾರತ ಸರ್ಕಲ್, ಡೊಂಗರಿಕೆರೆ ರಸ್ತೆ, ನ್ಯೂಚಿತ್ರ ಜಂಕ್ಷನ್ ಮೂಲಕ ಮಣ್ಣಗುಡ್ಡದ ಕಡೆಯಲ್ಲಿ ಸಂಚಾರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ನ್ಯೂಚಿತ್ರ ಜಂಕ್ಷನ್ನಿಂದ ನವಭಾರತ ವೃತ್ತದ ಕಡೆಗೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆಲಸ ಪೂರ್ಣಗೊಳ್ಳುವವರೆಗೆ, ನ್ಯೂಚಿತ್ರ ಜಂಕ್ಷನ್ನಿಂದ ನವಭಾರತ ವೃತ್ತದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂದರ್ನಿಂದ ಬರುವ ಘನ ಹಾಗೂ ಇತರ ಸರಕು ವಾಹನಗಳು ಬಂದರ್ ಜಂಕ್ಷನ್, ಅಜೀಜುದ್ದೀನ್ ರಸ್ತೆ, ಕೆಳ ರಥಬೀದಿ, ಬಾಲಾಜಿ ಜಂಕ್ಷನ್, ನ್ಯೂಚಿತ್ರ ಜಂಕ್ಷನ್ ಹಾಗೂ ಮಣ್ಣಗುಡ್ಡದಿಂದ ಚಲಿಸಬೇಕಾಗುತ್ತದೆ. ಲೇಡಿಹಿಲ್ ಕಡೆಯಿಂದ ಕೆಳ ರಥಬೀದಿ ಮೂಲಕ ಬಂದರ್ ಕಡೆಗೆ ಚಲಿಸುವ ವಾಹನಗಳು ದುರ್ಗಮಹಲ್ ಜಂಕ್ಷನ್ನಲ್ಲಿ ಎಡ ತಿರುವು ತೆಗೆದುಕೊಂಡು ಬಳ್ಳಾಲ್ಬಾಗ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಹಂಪನಕಟ್ಟೆ, ಎ ಬಿ ಶೆಟ್ಟಿ ವೃತ್ತದ ಮೂಲಕ ಚಲಿಸಬೇಕು. ಶ್ರೀನಿವಾಸ ಹೋಟೆಲ್ ಜಂಕ್ಷನ್ನಿಂದ ಓಂ ಮಹಲ್ ಜಂಕ್ಷನ್ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ಕೆಲಸ ಸಂಪೂರ್ಣವಾಗುವವರೆಗೂ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಆಯುಕ್ತರು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಬಲ್ಮಠ, ಫಳ್ನೀರ್, ಕರಂಗಲ್ಪಾಡಿ ಸೇರಿದಂತೆ ನಗರದ 61 ಪ್ರದೇಶಗಳನ್ನು ನೋ ಪಾರ್ಕಿಂಗ್ ಝೋನ್ ಆಗಿ ಘೋಷಿಸಲಾಗಿದೆ.