ಮಂಗಳೂರು, ಸೆ.26 (DaijiworldNews/HR): ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಪಡೆದಿರುವ ಖ್ಯಾತ ನಿರೂಪಕಿ, ನಟಿ ಅನುಶ್ರೀ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಅನುಶ್ರೀ ವಿಚಾರಣೆಗೆ ಸೆ.29ರ ಮೊದಲು ಹಾಜರಾಗುವಂತೆ ಪೊಲೀಸರು ನೋಟಿಸ್ನಲ್ಲಿ ತಿಳಿಸಿದ್ದರು. ಆದರೆ ಅವರು ಸೆ.25ರಂದೇ ಹಾಜರಾಗುವುದಾಗಿ ತಿಳಿಸಿದ್ದು, ಅದರಂತೆ ಪೊಲೀಸರು ಅನುಶ್ರೀ ಶುಕ್ರವಾರ ವಿಚಾರಣೆಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಜೆಯವರೆಗೂ ಅನುಶ್ರೀ ವಿಚಾರಣೆಗೆ ಬಂದಿರಲಿಲ್ಲ.
ಇಂದು ಬೆಳಗ್ಗೆಯೇ ನಿಗದಿತ ಸಮಯಕ್ಕೂ ಮುನ್ನವೇ ವಿಚಾರಣೆಗೆ ಮಂಗಳೂರಿನ ಹೊರ ವಲಯದ ಪಣಂಬೂರಿನಲ್ಲಿರುವ ಎಸಿಪಿ ಕಚೇರಿಗೆ ಅನುಶ್ರೀ ಹಾಜರಾಗಿದ್ದು, ಪಣಂಬೂರು ಠಾಣೆಯಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಸಿಸಿಬಿ ತಂಡ ವಿಚಾರಣೆ ನಡೆಸುತ್ತಿದ್ದು, ಕಿಶೋರ್, ತರುಣ್ ಪರಿಚಯದ ಬಗ್ಗೆ ಪ್ರಶ್ನಿಸಿದ್ದಾರೆ.
ಸಿಸಿಬಿ ಹಾಗೂ ಎಕಾನಮಿಕ್ ಮತ್ತು ನಾರ್ಕೊಟಿಕ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವನೆ ಮತ್ತು ಮಾರಾಟ ಆರೋಪದಲ್ಲಿ ಕಿಶೋರ್ ಮತ್ತು ಅಕೀಲ್ ನೌಶೀಲ್ ನನ್ನು ಬಂಧಿಸಿದ್ದರು. ಅನಂತರ ತರುಣ್ ಎಂಬವರನ್ನು ಕೂಡ ವಿಚಾರಣೆ ನಡೆಸಿದ್ದರು. ಈ ಸಂದರ್ಭ ಅನುಶ್ರೀಗೆ ಇವರ ಜತೆ ನಂಟು ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅನುಶ್ರೀಗೆ ನೋಟಿಸ್ ನೀಡಲಾಗಿತ್ತು.