Karavali
ತ್ಯಾಜ್ಯ ನುಂಗಿದ ಮಂದಾರ-ಸಂತ್ರಸ್ತರಿಗೆ ಸಿಗಲೇ ಇಲ್ಲ ಪರಿಹಾರ: ಮನೆ ಮಠ ಕೆಳೆದುಕೊಂಡವರ ವ್ಯಥೆಯ ಕಥೆ
- Wed, Sep 23 2020 10:51:04 PM
-
ಲೋಹಿತ್ ಕುಮಾರ್ ಬೆಳ್ತಂಗಡಿ,
ಮಂಗಳೂರು, ಸೆ. 23 (DaijiworldNews/SM): ಅಂದು ನೋಡ ನೋಡುತ್ತಿದ್ದಂತೆಯೇ ಮನೆಯೊಳಗಡೆ ತ್ಯಾಜ್ಯ ರಾಶಿಯೇ ಹರಿದು ಬರತೊಡಗಿತು. ಮನೆಯೊಳಗಿದ್ದವರು ಕಣ್ಣು ಮಿಟುಕಿಸುವಷ್ಟರಲ್ಲಿ ಗಬ್ಬು ನಾಥದೊಂದಿಗೆ ಬೃಹತ್ ರಾಶಿ ಮನೆಮುಂದೆ ಬಂದು ನಿಂತಿತ್ತು. ಅಂದು ಹೇಗೋ ಜೀವ ಉಳಿಸಿಕೊಂಡು ಮನೆಯೊಳಗಿಂದ ಹೊರಬಂದು ನೋಡಿದರೆ ತಾನಿದ್ದ ಜಾಗ, ನಂಬಿ ಬದುಕುತ್ತಿದ್ದ ಕೃಷಿ ಭೂಮಿ ಮಾಯವಾಗಿತ್ತು. ದೈವಸ್ಥಾನ, ನಾಗಬನಗಳೂ ತ್ಯಾಜ್ಯ ರಾಶಿಯಲ್ಲಿ ಕಣ್ಮರೆಯಾಗಿ ಹೋಯಿತು. ಬದುಕಿದೆಯೋ ಬಡ ಜೀವವೇ ಎಂದು ತಮ್ಮನ್ನು ತಾವೇ ಸಮಾಧಾನಗೊಳಿಸಿದರೂ, ಬದುಕುವ ದಾರಿಯ ಮುಂದೆ ತ್ಯಾಜ್ಯದ ರಾಶಿ ಅಡ್ಡಲಾಗಿ ನಿಂತು ನೆಮ್ಮದಿಯ ಜೀವನವನ್ನೇ ನುಂಗಿ ಹಾಕಿತ್ತು !! ಕಣ್ಣೀರೊಂದೆ ದಾರಿಯಾದಾಗ ಪರಿಹಾರ ಎಂಬ ಅಸ್ತ್ರವನ್ನು ಮುಂದಿಟ್ಟು ರಾಜ್ಯದ ಮುಖ್ಯಮಂತ್ರಿಗಳು, ರಾಜಕಾರಣಿಗಳು, ಅಧಿಕಾರಿಗಳು ದೌಡಾಯಿಸತೊಡಗಿದರು ತ್ಯಾಜ್ಯ ರಾಶಿಯಿಂದ ಮುಚ್ಚಿಹೋದ ಪಚ್ಚನಾಡಿ ಪ್ರದೇಶಕ್ಕೆ...!!
ಹೌದು, 2019 ಆಗಸ್ಟ್ 6 ನೇ ತಾರಿಕಿನ ಮಂಗಳವಾರ ಪಚ್ಚನಾಡಿಯ ತ್ಯಾಜ್ಯ ರಾಶಿ ಹರಿದು ಹೋಗಿ ಮಂದಾರ ಎನ್ನುವ ಪ್ರದೇಶದ ಸುಮಾರು 27 ಮನೆ, ಕೃಷಿ ಭೂಮಿ ಸೇರಿ ಎಲ್ಲವೂ ದುರಂತದಲ್ಲಿ ಆಹುತಿಯಾಯಿತು. ಮುಂದೊಂದು ದಿನ ಇಂತಹ ದುರಂತ ಸಂಭವಿಸಬಹುದು ಎಂಬ ಸಣ್ಣ ಕಲ್ಪನೆಯೂ ಇರದ ಮಂದಿಗೆ ಪ್ರಕೃತಿ ದೊಡ್ಡ ಆಘಾತವನ್ನೇ ನೀಡಿತ್ತು. ಅದಾದ ಬಳಿಕ ಮನೆ ಮಠ ಕಳೆದುಕೊಂಡವರಿಗೆ ಸರಕಾರ ಪರ್ಯಾಯವಾಗಿ ಪ್ಲ್ಯಾಟ್ ಒಂದರಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿತು. ಸದಾ ಕೃಷಿ ಚಟುವಟಿಕೆ, ಸಣ್ಣ ಪುಟ್ಟ ಕೆಲಸಗಳೊಂದಿಗೆ ಚುರುಕಿನಿಂದ ತಮ್ಮದೇ ಜಮೀನಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಮಂದಿಗೆ ಪ್ಲ್ಯಾಟ್ ಜೀವನ ಜೈಲು ಕಂಬಿಗಳ ಮಧ್ಯೆ ಇರುವ ಅನುಭವವನ್ನೇ ನೀಡುತ್ತಿದೆ. ತಲೆಯ ಮೇಲೊಂದು ಸೂರೆಂಬುದು ಇಹುದಾದರೂ, ಹೊಟ್ಟೆಗೆ ಮಾತ್ರ ಹಿಟ್ಟು ದೊರಕುತ್ತಿಲ್ಲ. ಕೃಷಿಯನ್ನೇ ನಂಬಿದ್ದ ಜನರಿಗೆ ಅನ್ಯ ಆದಾಯದ ಉಪಾಯವಿಲ್ಲ. ಕೇವಲ ಕೃಷಿಯನ್ನಷ್ಟೇ ಮಾಡಬಹುದು. ಆದರೆ, ನಾಲ್ಕು ಗೋಡೆಯ ಮಧ್ಯೆಗಿನ ಪ್ಲ್ಯಾಟ್ಯ್ ಜೀವನದಲ್ಲಿ ಕೃಷಿ ನಡೆಸಲು ಸಾಧ್ಯವೇ? ದುರಂತ ಸಂಭವಿಸಿದ ಕೆಲವೇ ದಿನಗಳವರೆಗೆ ಸರಕಾರದಿಂದ, ದಾನಿಗಳಿಂದ ಅಕ್ಕಿ ಸೇರಿದಂತೆ ದಿನಬಳಕೆಯ ಸಾಮಾನುಗಳು ದೊರೆಯುತ್ತಿತ್ತು. ಆದರೆ ಎಷ್ಟು ದಿನ? ದಿನ ಕಳೆದಂತೆ ಎಲ್ಲವೂ ಶೂನ್ಯವಾಗತೊಡಗಿತು.ಆದರೆ, ಹೊಟ್ಟೆ ಕೇಳಬೇಕೇ? ಈ ದಿನ ಯಾರೂ ಆಹಾರ ನೀಡಲಿಲ್ಲವೆಂದು ಹೊಟ್ಟೆ ಏನಾದರೂ ಹಸಿವನ್ನು ತಡೆದು ನಿಲ್ಲಿಸುವುದೇ? ಖಂಡಿತವಾಗಿಯೂ ಇಲ್ಲ... ಅದೇ ಕಾರಣಕ್ಕಾಗಿ, ಹೊಟ್ಟೆಯ ಹಸಿವು, ಬದುಕುವ ತವಕ ಆ ಮಂದಿಗೆ ಸಾಲ ಮಾಡವುದೊಂದೇ ಮುಂದಿನ ದಾರಿ ಎಂಬಂತಾಗಿಸಿತು. ಅಗತ್ಯ ಸಾಮಾಗ್ರಿಗಳು ಸಾಲದ ಮೂಲಕವೇ ಮನೆ ಸೇರತೊಡಗಿತು!. ಸಾಲವಾದರೂ ಎಷ್ಟು ದಿನ? ದಿನ ಸಾಗಿದಂತೆ ಸಾಲಗಾರರು ಮನೆಯ ಮುಂದೆ ಬರತೊಡಗಿದರು. ಆದರೆ, ಸಾಲ ಮರುಪಾವತಿಸಲು ಆದಾಯದ ಮೂಲವೇ ಇಲ್ಲದ ಜನ ಇಂದು ಚಾತಕ ಪಕ್ಷಿಗಳಂತೆ ಸರಕಾರದ ಪರಿಹಾರದ ಮೊತ್ತಕ್ಕಾಗಿ ಕಾಯುತ್ತಿದ್ದಾರೆ.
ಸಂತ್ರಸ್ತರ ಕೂಗು ಕೇಳಿಸಲೇ ಇಲ್ಲಾ ಖಾದಿ ತೊಟ್ಟ ಮುಖಂಡರಿಗೆ:
ಹುಟ್ಟಿ ಬೆಳೆದ ಹಚ್ಚ ಹಸುರಿನ ನಾಡನ್ನು ತ್ಯಾಜ್ಯ ರಾಶಿ ದೈತ್ಯ ಹಾವಿನಂತೆ ನುಂಗಿ ಮುಂದೆ ಸಾಗಿದಾಗ ಬದುಕಿದ ಜೀವ ಹೇಗೆ ತಡೆದುಕೊಳ್ಳಲು ಸಾಧ್ಯ ? ನೊಂದಿತು ಜೀವಗಳು, ಪರಿಹಾರವೆಂಬ ಮುಖವಾಡ ತೊಟ್ಟು ಬಂದ ಅಧಿಕಾರಿಗಳ ಮುಂದೆ ಕಣ್ಣೀರಿಡುತ್ತಾ ಅಂಗಲಾಚಿದರು. ಸಂತ್ರಸ್ತರ ಕೂಗು ಕೇವಲ ತ್ಯಾಜ್ಯ ರಾಶಿಯೊಡನೆ ಸಮ್ಮಿಲನವಾಯಿತೇ ಹೊರತು ಅಧಿಕಾರಿಗಳ, ರಾಜಕಾರಣಿಗಳ ಮನ ಮುಟ್ಟಿಲ್ಲ. ಸರಕಾರದ ಕದ ತಟ್ಟಲಿಲ್ಲ. ತನ್ನ ಜಾಗ, ತನ್ನ ಮನೆ ಮನದಲ್ಲಿ ನೆಮ್ಮದಿಯಾಗಿದ್ದ ಜೀವಗಳು ಮನೆ ಮಠ ಕಳೆದುಕೊಂಡು ಮಾನಸಿಕವಾಗಿ ಕುಗ್ಗಿ ಹೋಯಿತು. ಆ ನೋವು ಎಷ್ಟೆಂದರೆ, ಮಂದಾರ ಪ್ರದೇಶದಲ್ಲಿ ಲವ ಲವಿಕೆಯಿಂದ ಕೂಡಿದ್ದ ವ್ಯಕ್ತಿಯೋರ್ವರು ಪ್ಲ್ಯಾಟ್ ಗೆ ತೆರಳಿದ ಕೇವಲ ಒಂದೇ ವಾರದಲ್ಲಿ ಹಾಸಿಗೆ ಹಿಡಿದರು. ಎದ್ದು ಓಡಾಡಲು ಸಾಧ್ಯವಾಗದೇ, ಮಾತನಾಡಲು ಸಾಮರ್ಥ್ಯವಿಲ್ಲದೇ ಹೋದರೂ ತೊದಲು ನುಡಿಗಳೊಂದಿಗೆ ಹೇಳುವುದಿಷ್ಟೇ, "ಮಂದಾರ ಪ್ರದೇಶಕ್ಕೆ ಹೋಗುವ"..! ಹಾಗಿದ್ದರೆ, ಆ ಮನಗಳ ನೋವು ಹೇಗಿರಬಹುದು ?
ಮಾನವೀಯತೆ ಮರೆಯಾಯಿತೇ? ಕಣ್ಣಿದ್ದು ಕುರುಡರಾದರೇ?
ಮಂದಾರ ಪ್ರದೇಶದಲ್ಲಿ ತ್ಯಾಜ್ಯವೆಂಬ ನೆರೆ ಬಂದು ಸಂತ್ರಸ್ತರಾಗಿ ಬದುಕು ಕಳೆದುಕೊಂಡ ಸಂದರ್ಭದಲ್ಲಿದ್ದ ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಸೇರಿದಂತೆ ಹಲವಾರು ಕಾರಣಗಳಿಂದ ಇಲ್ಲಿಂದ ಹೊರಟರೇ ವಿನ: ಸಂತ್ರಸ್ತರಿಗೆ ಸೂಕ್ತವಾದ ನ್ಯಾಯವೆಂಬುದು ಸಿಕ್ಕಿಲ್ಲ. ಅಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಹಾ ನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಸದ್ಯ ಸಂಬಂಧಿತ ಹುದ್ದೆಯಲ್ಲಿಲ್ಲ. ಹೀಗೇ, ಅವರೊಂದಿಗೇ ಭರವಸೆಯ ಮಾತುಗಳು ಮರೆಯಾಯಿತೋ ಅಥವಾ ಮಾನವೀಯತೆಯನ್ನೇ ಮರೆತ ಅಧಿಕಾರಿಗಳು ಇಂದು ಅಧಿಕಾರದಲ್ಲಿರುವರೋ ತಿಳಿಯುತ್ತಿಲ್ಲ....
ಸಾಲದ ಸುಳಿಯಲ್ಲಿ ಸಂತ್ರಸ್ತರು:
ಸಾಲದ ಹೊರೆ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಲಗಾರರು ದಿನಾ ಬಂದು ಕೇಳುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ ನಾವುಗಳು, ಯಾರೊಬ್ಬರೂ ನಮ್ಮ ಜೊತೆ ನಿಲ್ಲುತ್ತಿಲ್ಲ. ಅಂದು ಅಧಿಕಾರಿಗಳು ಭೇಟಿ ನೀಡುತ್ತಿದ್ದರಾದರೂ ಇಂದು ಯಾರೂ ಬರುತ್ತಿಲ್ಲ. ಹೊಸ ಜಿಲ್ಲಾಧಿಕಾರಿಗಳು ಬಂದಿರುವರಾದಾದರೂ, ಈ ಪ್ರದೇಶಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಕೃಷಿ ಪರಿಹಾರ ದೊರಕಿದೆಯೇ ಹೊರತು ಬೇರ್ಯಾವ ಪರಿಹಾರವೂ ದೊರಕಿಲ್ಲ. ಇನ್ನು ನಮಗೆ ಸಾವೊಂದೇ ಪರಿಹಾರವಾಗಿದೆ ಎಂದು ಸಂತ್ರಸ್ತೆಯೋರ್ವರು ಅಳಲು ತೋಡಿಕೊಂಡಿದ್ದಾರೆ.
ಯಾರೊಬ್ಬರೂ ಊಹಿಸದಂತಹ ದುರಂತ ಅಂದು ನಡೆದುಹೋಯಿತು. ಅದಾದ ಬಳಿಕವಾದರೂ ತ್ಯಾಜ್ಯ ರಾಶಿಯನ್ನು ಅಲ್ಲಿ ಸುರಿವುದು ನಿಂತಿತೇ ಇಲ್ಲ. ಪಚ್ಚನಾಡಿ ಪ್ರದೇಶದಲ್ಲೇ ಇಂದಿಗೂ ತ್ಯಾಜ್ಯವನ್ನು ತಂದು ಸುರಿಯಲಾಗುತ್ತದೆ. ಎಲ್ಲೆಡೆ ಸಂಜೆಯ ತಂಗಾಳಿ ಹಿತ ನೀಡಿದರೆ, ಪಚ್ಚನಾಡಿ ಮತ್ತು ಅದರ ಆಸು-ಪಾಸಿನ ಜನರಿಗೆ ಮಾತ್ರ ಸಂಜೆಯ ತಂಗಾಳಿ ದುರ್ನಾತವನ್ನು ಬೀರುತ್ತಿದೆ. ಆದರೆ, ಇಂತಹ ದುರಂತಕ್ಕೆಲ್ಲಾ ಯಾರು ಹೊಣೆ ? ಸರಕಾರ, ಅಧಿಕಾರಿಗಳು, ರಾಜಕಾರಣಿಗಳನ್ನಷ್ಟೇ ದೂರಿದರೇ ಸಾಕೇ ? ಖಂಡಿತಾ ಇಲ್ಲ. ಇಲ್ಲಿ ನಮ್ಮ ಪಾಲು ಅಧಿಕವಾಗಿದೆ. ನಮ್ಮ ಮನೆ ಮನೆಯಿಂದ ಸಂಗ್ರಹಿಸಿದ ತ್ಯಾಜ್ಯ ಅಂದು ಆ ಕುಟುಂಬಗಳ ಜೀವನವನ್ನು ಕತ್ತಲಿನೆಡೆಗೆ ದೂಡಿದ್ದು ಸುಳ್ಳಲ್ಲ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಎಷ್ಟೇ ಅಭಿಯಾನ, ಕಾರ್ಯಕ್ರಮ, ಜಾಗೃತಿ ಮೂಡಿಸಿದರೂ ಕೇವಲ ಮಂಗಳೂರು ನಗರದಿಂದ ಲೋಡ್ ಗಟ್ಟಲೇ ಪ್ಲಾಸ್ಟಿಕ್ ಗಳು ದಿನವೊಂದಕ್ಕೆ ಭೂಮಿಯನ್ನು ಸೇರುತ್ತಿದೆ. ಅದರ ಜೊತೆಯಲ್ಲಿ ತರಕಾರಿ, ಮಾಂಸ ಹೀಗೆ ತ್ಯಾಜ್ಯಗಳ ರಾಶಿ.. 2019ರ ದುರಂತ ಕೇವಲ ಮಂದಾರ ಪ್ರದೇಶವನ್ನು ನುಂಗಿ ಹಾಕಿತು. ಮುಂದೆ 3039 ರ ವೇಳೆಗೆ ಅದೇ ಪಚ್ಚನಾಡಿಯ ತ್ಯಾಜ್ಯ ರಾಶಿ ಮಂಗಳೂರಿನ ಅರ್ಧ ನಗರವನ್ನೇ ನುಂಗಿ ಹಾಕಿದರೂ ಆತಂಕಪಡಬೇಕಾಗಿಲ್ಲ !! ಹಾಗಾಗಿ, ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯಗಳನ್ನು ಆದಷ್ಟು ಕಡಿಮೆ ಮಾಡೋಣ, ಈ ಸಮಾಜದ ಉಳಿವಿಗಾಗಿ ನಮ್ಮ ತುಳುನಾಡು, ಕಡಲ ನಗರಿಯ ಸುರಕ್ಷತೆ, ಆರೋಗ್ಯಕ್ಕಾಗಿ ಶ್ರಮಿಸೋಣ...