ಮಂಗಳೂರು, ಸೆ. 22 (DaijiworldNews/MB) : ಲೇಡಿಹಿಲ್ ಜಂಕ್ಷನ್ ಅಥವಾ ವೃತ್ತದ ಹೆಸರನ್ನು ಬದಲಾಯಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕ್ರೈಸ್ತ ಸಮುದಾಯದ ಮುಖಂಡರು ಮಂಗಳೂರು ನಗರ ನಿಗಮದ (ಎಂಸಿಸಿ) ಮೇಯರ್ಗೆ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಆಯುಕ್ತರು ಹಾಗೂ ಮೇಯರ್ ಅವರನ್ನು ಉದ್ದೇಶಿಸಿ ಬರೆಯಲಾಗಿರುವ ಮನವಿ ಪತ್ರದಲ್ಲಿ ಕಥೋಲಿಕ್ ಸಭಾ ''ಲೇಡಿಹಿಲ್'' ಹೆಸರಿನ ಐತಿಹಾಸಿಕ ಮಹತ್ವ ಮತ್ತು ಹೆಸರಿಗೆ ಇರುವ ಭಾವಾನಾತ್ಮಕ ಸಂಬಂಧಗಳ ಬಗ್ಗೆ ವಿವರಿಸಲಾಗಿದೆ.
ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಫ್ರಾನ್ಸಿನಿಂದ ಮಂಗಳೂರಿಗೆ 1885 ನೇ ಇಸವಿಯಲ್ಲಿ ಅಂದಿನ ಮದರ್ ಜನರಲ್ ಮಾರಿ ದೇಸ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಶಾಲೆ ತೆರೆಯಬೇಕೆಂದು ಸ್ಥಳೀಯ ಸಾರ್ವಜನಿಕರು ಒತ್ತಾಯಪಡಿಸಿದ್ದರು. ಆ ಸಂದರ್ಭದಲ್ಲಿ ಅದೊಂದು ಗುಡ್ಡ ಪ್ರದೇಶವಾಗಿತ್ತು. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಇರಲಿಲ್ಲ. ಆದುದರಿಂದ ಸ್ಥಳೀಯ ಜನರ ಒತ್ತಾಯದ ಮೇರೆಗೆ, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಹೆಣ್ಣು ಮಕ್ಕಳ ಶಾಲೆಯನ್ನು ತೆರೆಯಲಾಗಿತ್ತು. ಈ ಶಾಲೆಯ ಮುಖಾಂತರ ಸಾವಿರಾರು ಹೆಣ್ಮಕ್ಕಳು ವಿದ್ಯಾಭ್ಯಾಸ ಹೊಂದಿ ಜೀವನದಲ್ಲಿ ಸಾಧನೆಯನ್ನು ಮಾಡಿದ್ದರು. ಸ್ಥಳೀಯ ಜನರು ಹೆಣ್ಮಕ್ಕಳ ಮೇಲಿನ ಅಭಿಮಾನದಿಂದ ಮತ್ತು ಗೌರವ ತೋರಿಸಲು ಈ ಸ್ಥಳಕ್ಕೆ ಲೇಡಿಹಿಲ್ ಎಂದು ನೂರಾರು ವರ್ಷಗಳಿಂದ ಕರೆಯಲಾಗುತ್ತಿದೆ. ಹೆಣ್ಮಕ್ಕಳ ವಿದ್ಯಾಭ್ಯಾಸದ ಪ್ರತೀಕವಾದ ಹಾಗೂ ಹೆಸರು ವಾಸಿಯಾದ ಈ ಸ್ಥಳದ ಹೆಸರನ್ನು ಬದಲಾಯಿಸುವುದು ಸಮಂಜಸವಲ್ಲ. ಇತಿಹಾಸವನ್ನು ಬದಲಾಯಿಸುವುದು ಸಮಂಜಸವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಾಸ್ತವವಾಗಿ, ಲೇಡಿ ಆಫ್ ಮೌಂಟ್ ಕಾರ್ಮೆಲ್ನ ಆಶ್ರಯದಲ್ಲಿ ಶಾಲೆಯನ್ನು ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಪ್ರಾರಂಭಿಸಿದರು. ಲೇಡಿ ಆಫ್ ಮೌಂಟ್ ಕಾರ್ಮೆಲ್ ಯೇಸುಕ್ರಿಸ್ತನ ತಾಯಿ ಮೇರಿಯನ್ನು ಸೂಚಿಸುತ್ತದೆ. ಕ್ಯಾಥೊಲಿಕರು ಮೇರಿಯನ್ನು ಪೂಜಿಸುತ್ತಾರೆ ಮತ್ತು ಇದು ಧಾರ್ಮಿಕ ಮಹತ್ವವನ್ನು ಹೊಂದಿದೆ. ನೂರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹೆಸರನ್ನು ಬದಲಾವಣೆ ಮಂಗಳೂರು ನಗರದ ಕ್ಯಾಥೊಲಿಕ್ ಬಂಧುಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುತ್ತದೆ. ಆದ್ದರಿಂದ, ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಈ ಹಿಂದಿನ ಹೆಸರನ್ನು ಬದಲಾವಣೆ ಮಾಡಬಾರದು ಎಂದು ವಿನಂತಿಸಲಾಗಿದೆ.
ಲೇಡಿಹಿಲ್ ಪ್ರಾಥಮಿಕ ಶಾಲೆ, ಲೇಡಿಹಿಲ್ ಪ್ರೌಢಶಾಲೆ, ಲೇಡಿಹಿಲ್ ಪದವಿ ಪೂರ್ವ ಕಾಲೇಜು ಹೀಗೆ 100 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಹೆಸರಿನಲ್ಲಿ ಈ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಲೇಡಿಹಿಲ್ ರಿಕ್ಷಾ ನಿಲ್ದಾಣ ಮತ್ತು ಲೇಡಿಹಿಲ್ ಬಸ್ ನಿಲ್ದಾಣ ಎಂದು ಕರೆಯಲ್ಪಡುವ ರಿಕ್ಷಾ ಮತ್ತು ಬಸ್ ನಿಲ್ದಾಣಗಳಿವೆ. ಬಸ್ ಪರವಾನಗಿಗಳಲ್ಲಿ ಸಹ ಲೇಡಿಹಿಲ್ ಜಂಕ್ಷನ್ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಹಲವಾರು ಬಸ್ಸುಗಳು ಲೇಡಿಹಿಲ್ ಜಂಕ್ಷನ್ ಮೂಲಕ ಚಲಿಸುತ್ತವೆ. 2020 ರ ಜನವರಿ 30 ರ ಮಂಗಳೂರು ನಗರ ನಿಗಮದ ನಿರ್ಣಯದ ಪ್ರಕಾರ ಲೇಡಿ ಹಿಲ್ ಜಂಕ್ಷನ್ನಲ್ಲಿ ಲೇಡಿಹಿಲ್ ವೃತ್ತವನ್ನು ಮೂರು ವರ್ಷಗಳಲ್ಲಿ ನಿರ್ಮಿಸಲು ಮತ್ತು ನಿರ್ವಹಿಸಲು ಕರ್ನಾಟಕ ಬ್ಯಾಂಕ್ಗೆ ಅನುಮತಿ ನೀಡಲಾಗಿದೆ.
ಹಾಗೆಯೆ, ಫೆಬ್ರವರಿ 28, 2019 ರ ಮಂಗಳೂರು ಸಿಟಿ ಕಾರ್ಪೊರೇಶನ್ ರೆಸಲ್ಯೂಶನ್ ನಂ 98 / 2018-19 ರ ಪ್ರಕಾರ, ಲೇಡಿಹಿಲ್ ಜಂಕ್ಷನ್ನಿಂದ ನ್ಯೂ ಚಿತ್ರ ಜಂಕ್ಷನ್ವರೆಗಿನ ರಸ್ತೆಯನ್ನು 'ಶ್ರೀ ಗೋಕರ್ಣನಾಥ ಕ್ಷೇತ್ರ ರಸ್ತೆ'' ಎಂದು ಹೆಸರಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
"ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕಥೋಲಿಕರು ವಾಸಿಸುತ್ತಿದ್ದಾರೆ. ಈಗ ಹೆಸರನ್ನು ಬದಲಾಯಿಸಿದರೆ, ಅದು ಕಥೋಲಿಕರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತದೆ ಮತ್ತು ಇತಿಹಾಸವನ್ನು ತಿರುಚಿದಂತೆ ಆಗುತ್ತದೆ. ಇದಕ್ಕೂ ಮೊದಲು 2003 ಮತ್ತು 2018 ರಲ್ಲಿ ಲೇಡಿಹಿಲ್ ಜಂಕ್ಷನ್ ಹೆಸರನ್ನು ಬದಲಾಯಿಸುವ ಪ್ರಯತ್ನಗಳು ನಡೆದವು. ಆದರೆ ಸಾರ್ವಜನಿಕರಿಂದ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆ ಈ ಪ್ರಸ್ತಾಪವನ್ನು ಕೈಬಿಡಲಾಯಿತು. ವೃತ್ತದ ಹೆಸರನ್ನು ಬದಲಾಯಿಸುವುದು ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕ್ಯಾಥೊಲಿಕ್ ಸಭಾ ಮಂಗಳೂರಿನ ಅಧ್ಯಕ್ಷರು ರೋಲ್ಫಿ ಡಿ ಕೋಸ್ತಾ, ಅಖಿಲ ಭಾರತ ಕ್ಯಾಥೊಲಿಕ್ ಯೂನಿಯನ್ ಅಧ್ಯಕ್ಷ ಲ್ಯಾನ್ಸಿ ಡಿ ಕುನ್ಹಾ, ಪಿಜೆ ರೊಡ್ರಿಗಸ್, ಆಲ್ವಿನ್ ಪಾನೀರ್, ಲೇಡಿಹಿಲ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಭಗಿನಿ ಉಜ್ವಲ ಮೊದಲಾದವರು ಮನವಿ ಪತ್ರವನ್ನು ಆಯುಕ್ತರು, ಮೇಯರ್ ಮತ್ತು ಇತರ ಮುಖಂಡರಿಗೆ ಸಲ್ಲಿಸಿದರು.