ಕಾಸರಗೋಡು, ಸೆ 18 (DaijiworldNews/PY): ಜಿಲ್ಲೆಯ ಉದಯೋನ್ಮುಖ ಕ್ರಿಕೆಟಿಗನೋರ್ವ ದುಬೈಯ ಅಜ್ಮಾನ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಸೆ.16ರ ಬುಧವಾರ ನಡೆದಿದೆ.
ಮೃತರನ್ನು ನೀಲೇಶ್ವರ ಮೂಲದ ಸೇಲಂಕುಮಾರ್ ಅವರ ಪುತ್ರ ಶ್ರೀಲಾಲ್ (26) ಎಂದು ಗುರುತಿಸಲಾಗಿದೆ.
ಶ್ರೀಲಾಲ್ ಉದಯೋನ್ಮುಖ ಕ್ರಿಕೆಟಿಗನಾಗಿದ್ದು, ಕಾಸರಗೋಡಿನ ಕೆಲವು ತಂಡದ 14, 16 ಹಾಗೂ 19 ವರ್ಷದೊಳಗಿನ ಪಂದ್ಯಾಟದಲ್ಲಿ ಆಡಿದ್ದರು. ಅಲ್ಲದೇ, ದುಬೈಯಲ್ಲಿ ಕೂಡಾ ಕೆಲ ತಂಡದ ಪರ ಆಡಿದ್ದರು.
ಶ್ರೀಲಾಲ್ ಅವರು 2017ರಲ್ಲಿ ದುಬೈಗೆ ಭೇಟಿ ನೀಡಿದ್ದು, ಸ್ವಲ್ಪ ಸಮಯದ ಬಳಿಕ ತಮ್ಮ ಊರಿಗೆ ವಾಪಾಸ್ಸಾಗಿದ್ದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಅವರು ಪುನಃ ದುಬೈಗೆ ಭೇಟಿ ನೀಡಿದ್ದು, ಶಾರ್ಜಾದಲ್ಲಿ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರರಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದರು. ಬಳಿಕ ಅವರು ಮತ್ತೊಂದು ಸಂಸ್ಥೆಯಲ್ಲಿ ಒಳ್ಳೆಯ ಉದ್ಯೋಗ ಪಡೆದಿದ್ದು, ಹೊಸ ಸಂಸ್ಥೆಗೆ ಸೇರಲು ತಯಾರಾಗುತ್ತಿದ್ದರು ಎನ್ನಲಾಗಿದೆ.
ಬುಧವಾರ ತಡರಾತ್ರಿ ಅವರು ಅಜ್ಮಾನ್ನಲ್ಲಿರುವ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.