ಮಂಗಳೂರು, ಸೆ 18 (DaijiworldNews/PY): ವೃದ್ದೆಯೋರ್ವರ ಮೇಲೆ ದ್ರವ ಸಿಂಪಡಿಸಿ ಹಾಡಹಗಲೇ ಚಿನ್ನದ ಸರವನ್ನು ದರೋಡೆಕೋರನೋರ್ವ ಕಿತ್ತುಕೊಂಡು ಹೋದ ಘಟನೆ ಶುಕ್ರವಾರ ಕುಂಟಿಕಾನ ಬಸ್ ನಿಲ್ದಾಣದ ಬಳಿ ನಡೆದಿದೆ.
ಸಾಂದರ್ಭಿಕ ಚಿತ್ರ
ವಿನೋದ (60) ಎಂಬವರು ಕುಂಟಿಕಾನದಲ್ಲಿರುವ ಅಂಚೆ ಕಚೇರಿಗೆ ಹೋಗಿ ಮನೆಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೋರ್ವ ಅವರ ಬಳಿ ಬಂದು ಮಾತನಾಡುತ್ತಿದ್ದು, ವೃದ್ದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ.
ಹೀಗೆ ಮಾತನಾಡುತ್ತಿರುವ ವೇಳೆ ಆತ ಇದ್ದಕ್ಕಿದಂತೆ ಒಂದು ಕ್ಯಾನ್ನಲ್ಲಿದ್ದ ರಾಸಾಯನಿಕ ದ್ರವವನ್ನು ವೃದ್ದೆಯ ಮೇಲೆ ಸಿಂಪಡಿಸಿದ್ದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ವೃದ್ದೆ ಕೂಗಲಾರಂಭಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕೂಡಲೇ ಕಾವೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೃದ್ದೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವು 32 ಗ್ರಾಂ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.