ಮಂಗಳೂರು, ಸೆ 18 (DaijiworldNews/PY): ನಗರದ ಹಂಪನಕಟ್ಟೆಯಲ್ಲಿ ಒಂದು ಶತಮಾನಕ್ಕೂ ಹಿಂದಿನ ಹಳೆಯ ಬಾವಿ ಪತ್ತೆಯಾಗಿದ್ದು, ವಿಶೇಷವೆಂದರೆ ಈ ಬಾವಿ ಈಗಲೂ ಸುಸ್ಥಿತಿಯಲ್ಲಿದೆ. ಈ ಬಾವಿ ತುಂಬಾ ಆಳವಾಗಿದ್ದು, ಇದು ಸುಮಾರು 100 ಅಡಿ ಆಳ ಹೊಂದಿದೆ ಎನ್ನಲಾಗುತ್ತಿದೆ.
ಹಂಪಕನಕಟ್ಟೆಯ ಸಿಗ್ನಲ್ ಬಳಿಯಿರುವ ಆಟೋ ರಿಕ್ಷಾ ಸ್ಟ್ಯಾಂಡ್ ಬಳಿ ಈ ಬಾವಿ ಪತ್ತೆಯಾಗಿದೆ. ಕೆಲವು ದಿನಗಳಿಂದ ಈ ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಜಂಕ್ಷನ್ನ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ರಸ್ತೆ ಅಗೆಯುವ ಕೆಲಸ ನಡೆಯುತ್ತಿತ್ತು. ಈ ವೇಳೆ ಕಾಂಕ್ರೀಟ್ನ ಸ್ಲಾಬ್ ಕಾಣಿಸಿಕೊಂಡಿದ್ದು, ಕಾರ್ಮಿಕರು ಕಾಂಕ್ರೀಟ್ನ ಸ್ಲಾಬ್ ಅನ್ನು ಮೇಲೆತ್ತಿ ನೋಡಿದ ಸಂದರ್ಭ ಬಾವಿ ಪತ್ತೆಯಾಗಿದೆ.
ಬಾಯಾರಿ ಬಂದವರಿಗೆ ಬೆಲ್ಲ ನೀರು ನೀಡುತ್ತಿದ್ದ ಅಪ್ಪಣ್ಣ:
ಅಪ್ಪಣ್ಣ ಎಂಬ ವ್ಯಕ್ತಿಯಿಂದಾಗಿ ಈ ಪ್ರದೇಶವು ಹಂಪನಕಟ್ಟೆ ಎಂಬ ಹೆಸರನ್ನು ಪಡೆದುಕೊಂಡಿದೆ ಎಂದು ಹಲವಾರು ಮಂದಿ ಹೇಳುತ್ತಾರೆ. ಅಪ್ಪಣ್ಣ ಎಂಬವರು ಪ್ರಸ್ತುತ ಹಂಪನಕಟ್ಟೆಯ ಅಶ್ವತ್ಥ ಮರದ ಕಟ್ಟೆಯ ಮೇಲೆ ಕುಳಿತು ದಾರಿಹೋಕರಿಗೆ ನೀರು ನೀಡುತ್ತಿದ್ದರು. ಹಾಗಾಗಿ ಈ ಪ್ರದೇಶವನ್ನು ಅಪ್ಪಣ್ಣ ಕಟ್ಟೆ ಎಂದು ಕರೆಯಲಾಗುತ್ತಿತ್ತು. ಬಳಿಕ ಈ ಪ್ರದೇಶವನ್ನು ಹಂಪನಕಟ್ಟೆ ಎಂದು ಕರೆಯಲಾಯಿತು. ಅಲ್ಲದೇ ಈಗ ಪತ್ತೆಯಾದ ಬಾವಿ ಕೂಡಾ ಅಪ್ಪಣ್ಣ ಬಾವಿ ಎಂದು ಪ್ರಸಿದ್ದಿ ಹೊಂದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಈ ನಗರದಲ್ಲಿ ಹಿಂದೆ ಹಲವಾರು ಕೆರೆ, ಬಾವಿಗಳಿದ್ದವು. ಇದರಿಂದಾಗಿ ಮಂಗಳೂರು ಬಾವಿಗಳ ನಗರ ಎನ್ನುವ ಹೆಸರೂ ಕೂಡಾ ಇದೆ. ಉತ್ತಮವಾದ ನೀರಿನ ಮೂಲವನ್ನು ಹೊಂದಿರುವ ವಿಶಿಷ್ಟ ಬಾವಿಗಳನ್ನು ಸಂರಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬಾವಿ ಪತ್ತೆಯಾದ ಬಳಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಬಾವಿ ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮತ್ತು ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಹೇಳಿದ್ದಾರೆ.