ಮಂಗಳೂರು, ಸೆ 18 (DaijiworldNews/PY): ಅಂಬ್ಲಮೊಗರು ಗ್ರಾಮದ ತಿಲಕ್ನಗರ ಬಳಿಯ ಮಂಡಲಕ್ಕೆ ಸೇರಿದ ಕಟ್ಟಡವನ್ನು ಬುಧವಾರ ತಡರಾತ್ರಿ ದುಷ್ಕರ್ಮಿಗಳು ನೆಲಸಮ ಮಾಡಿದ್ದು,ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 18 ವರ್ಷಗಳಿಂದ ತಿಲಕ್ನಗರದ ವೈದ್ಯನಾಥ ಯುವ-ಯುವತಿ ಮಂಡಲಕ್ಕೆ ಸೇರಿದ ಕಟ್ಟಡದಲ್ಲಿ ಯುವಕರು ಮೊಸರು ಕುಡಿಕೆ ಉತ್ಸವ ಆಚರಿಸುತ್ತಿದ್ದರು. ಸಂಸ್ಥೆಯ ಕಟ್ಟಡವು ಕಳೆದ 10 ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿದ್ದು, ಇದನ್ನು ಸ್ಥಳೀಯ ಜನರು ಆಕ್ಷೇಪಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಕರಣಿಕರಿಗೆ ದೂರು ನೀಡಲಾಗಿದ್ದು, ಯಥಾಸ್ಥಿತಿ ಕಾಯುವಂತೆ ಆದೇಶಿಸಲಾಗಿತ್ತು.
ಆದರೆ, ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ. ಈ ಘಟನೆಯು ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಬಹುದು ಎಂದು ಪರಿಗಣಿಸಿ, ಡಿಸಿಪಿ, ಎಸಿಪಿ ಮತ್ತು ಕೊಣಾಜೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರೊಂದಿಗೆ ಚರ್ಚೆ ನಡೆಸಿದರು. ಕಂದಾಯ ಅಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳೂ ಸ್ಥಳಕ್ಕೆ ಬಂದು ವಿಷಯವನ್ನು ತಹಶೀಲ್ದಾರ್ಗೆ ಮಾಹಿತಿ ನೀಡಿದ್ದಾರೆ.
ಕಟ್ಟಡ ಕೆಡವಿರುವ ಬಗ್ಗೆ ಶಾಸಕ ಯು.ಟಿ.ಖಾದರ್ ಖಂಡಿಸಿದ್ದು, ಯಾವುದೇ ವಿವಾದಗಳಿದ್ದಲ್ಲಿ ಕಂದಾಯ ಇಲಾಖೆ ನಿವಾರಿಸಬೇಕು. ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಬೇಕು. ಘಟನೆಯ ತನಿಖೆಗಾಗಿ ಡಿಸಿಪಿ ಮಟ್ಟದಲ್ಲಿ ತಂಡವನ್ನು ರಚಿಸಬೇಕು ಹಾಗೂ ಆರೋಪಿಗಳನ್ನು ಬಂಧಿಸಬೇಕು ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಅವರು, ಸ್ಥಳೀಯರು ಮತ್ತು ಯುವಕ ಮಂಡಲ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಜನರು ಶಾಂತಿ ಕಾಪಾಡಬೇಕು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಬಿಜೆಪಿ ಮಂಗಳೂರು ಮಂಡಲ ಮುಖ್ಯ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಉಪಾಧ್ಯಕ್ಷ ಯಶ್ವಂತ್ ಅಮೀನ್, ಭರತ್ ರಾಜ್ ಗಟ್ಟಿ, ಸಂಜೀವ ಶೆಟ್ಟಿ ಅಂಬ್ಲಮೊಗರು, ಚರಣ್ ರಾಜ್, ಸುಮಲತ, ಕಿಶೋರ್ ಮುನ್ನೂರು ಉಪಸ್ಥಿತರಿದ್ದರು.