ಕುಂದಾಪುರ, ಸೆ 17 (DaijiworldNews/PY): ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಕುಂದಾಪುರದ ವತಿಯಿಂದ ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ 'ಯುವ ನೆತ್ತರು' ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕುಂದಾಪುರದ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಕಿರಣ್ ಕೊಡ್ಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿ, ಸ್ವಚ್ಛತೆ ಮತ್ತು ಹಸಿರು ಪ್ರಧಾನಿ ನರೇಂದ್ರ ಮೋದಿಯವರ ಉಸಿರು. ವಿಶ್ವ ಕಂಡ ಮಹಾನ್ ನಾಯಕ, ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಬೇರೆ ಬೇರೆ ಕಾರ್ಯಗಳನ್ನು ನೀಡಲಾಗಿದೆ. ಯುವ ಮೋರ್ಚಾ ರಕ್ತದಾನ ಶಿಬಿರವನ್ನು ಮಾಡಿದರೆ, ಮಹಿಳಾ ಮೋರ್ಚಾ ದೇವಸ್ಥಾನಗಳಲ್ಲಿ ಪ್ರಧಾನಿಯವರ ಹೆಸರಲ್ಲಿ ಅರ್ಚನೆ ಮಾಡುತ್ತಿದೆ. ಎಸ್.ಟಿ ಮೋರ್ಚಾ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಹಿಂದುಳಿದ ಮೋರ್ಚಾ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯ ಮಾಡುತ್ತಿದೆ. ಒಂದು ವಾರದ ತನಕ ಕಾರ್ಯಕ್ರಮಗಳನ್ನು ಬಿಜೆಪಿ ಹಾಕಿಕೊಂಡಿದೆ ಎಂದು ಹೇಳಿದ ಅವರು, ಇವತ್ತು ಚೀನಾದ ನಿದ್ದೆಗೆಡಿಸಿದ್ದು ಇದ್ದರೆ ಅದು ಭಾರತ ಮಾತ್ರ. ಚೀನಾ ಎಲ್ಲ ದೇಶಗಳನ್ನು ಎದುರಿಸಿಕೊಂಡು ಬರುತ್ತಿದೆ. ಅಂತಹ ಚೀನಾ ಇಂದು ಭಾರತ ಎಲ್ಲಿ ಆಕ್ರಮಣ ಮಾಡುತ್ತದೋ ಎನ್ನುವ ಆತಂಕ ಎದುರಿಸುತ್ತಿದ್ದರೆ ಅದಕ್ಕೆ ಕಾರಣ ನಮ್ಮ ಪ್ರಧಾನಿ ಮೋದಿಯವರು ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕುಂದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ, ಸತೀಶ ಪೂಜಾರಿ, ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ ಕಡ್ಗಿ ಕಾರ್ಯಕ್ರಮ ನಿರ್ವಹಿಸಿದರು. ಸುನಿಲ್ ಖಾರ್ವಿ ವಂದಿಸಿದರು. ಕಾರ್ಯಕ್ರಮದ ಬಳಿಕ ಹಿಂದುಳಿದ ಮೋರ್ಚಾದ ವತಿಯಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.