ಮಂಗಳೂರು, ಸೆ. 17 (DaijiworldNews/MB) : ''ಸಚಿವರಾಗಿದ್ದ ಸಂದರ್ಭದಲ್ಲಿ ರಮಾನಾಥ ರೈ, ಶಾಸಕ ಯು. ಟಿ. ಖಾದರ್ ಅವರು ಡ್ರಗ್ಸ್ ಬಗ್ಗೆ ಯಾಕೆ ತನಿಖೆ ಮಾಡಿಲ್ಲ?'' ಎಂದು ಬಿಜೆಪಿ ರಾಜ್ಯಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ಮಂಗಳೂರಿನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ''ಡ್ರಗ್ಸ್ ಮಾಫಿಯಾದಲ್ಲಿ ಮಂಗಳೂರಿನ ಮಾಜಿ ಮೇಯರ್ ಒಬ್ಬರ ಮಗ ಇರಲಿಲ್ಲವೇ?'' ಎಂದು ಕೂಡಾ ಟಾಂಗ್ ನೀಡಿದ್ದಾರೆ.
''ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಡ್ರಗ್ಸ್ ಮಾಫಿಯಾ ಇರಲಿಲ್ಲವೇ'' ಎಂದು ಪ್ರಶ್ನಿಸಿರುವ ನಳಿನ್ ಅವರು, ''ರಮಾನಾಥ ರೈ ಅವರು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರು ಆಗಿದ್ದಾಗ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದಿತ್ತು. ಪಂಚಾಯತಿ ಅಧ್ಯಕ್ಷರಿಂದ ಹಿಡಿದು ಬೀದಿಯಲ್ಲಿ ನಡೆದು ಹೋಗುತ್ತಿದ್ದವರು ಕೂಡಾ ಹತ್ಯೆಯಾಗಿದ್ದಾರೆ'' ಎಂದು ರೈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ''ಬಿಜೆಪಿ ಸರ್ಕಾರ ಬಂದ ಬಳಿಕ ಸರಣಿ ಹತ್ಯೆ ನಿಂತು ಹೋಗಿದೆ'' ಎಂದು ಹೇಳಿದರು.
ಇನ್ನು ''ಮರಳು ಮಾಫಿಯಾ ಮಾಡುವವರು ರೈ ಬೆಂಬಲಿಗರು'' ಎಂದು ಆರೋಪ ಮಾಡಿರುವ ಅವರು, ''ಮರಳು ನೀತಿಯನ್ನು ಮುಂದಿನ ಅಕ್ಟೋಬರ್ನಲ್ಲಿ ನಾವು ಜಾರಿಗೆ ತರಲಿದ್ದು ಎರಡು ಸಾವಿರಕ್ಕೆ ಮನೆ ಬಾಗಿಲಿಗೆ ಮರಳು ಬರಲಿದೆ. ಖಾದರ್ ಕಾಲದಲ್ಲಿ ಮರಳಿಗೆ 20 ಸಾವಿರ ಆಗಿತ್ತು. ಬಿಜೆಪಿ 2 ಸಾವಿರಕ್ಕೆ ಮನೆ ಬಾಗಿಲಿಗೆ ಮರಳು ನೀಡಲಿದೆ ಎಂದು ಹೇಳಿದ್ದು ಇದೇ ವೇಳೆ ಮಂಗಳೂರಿನಲ್ಲಿ ಯಾವುದೇ ಪಬ್ಗಳಿಗೆ ಪರವಾನಗಿ ನೀಡಲು ಬಿಡುವುದಿಲ್ಲ'' ಎಂದು ಹೇಳಿದ್ದಾರೆ.