ಉಡುಪಿ, ಸೆ 17 (DaijiworldNews/PY): ಏಳು ವರ್ಷಗಳ ಹಿಂದೆ ಕಡೆಕಾರು ಗ್ರಾಮದ ಪಟೇಲ್ ತೋಟದಲ್ಲಿ ರಂಜಿತಾ(19) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಡೆಕಾರ್ ಗ್ರಾಮದ ಪಟೇಲ್ತೋಟ ನಿವಾಸಿ ಯೋಗಿಶ್ (32) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
2013ರಲ್ಲಿ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರ ತನಿಖೆ ನಡೆಸಿದ ಆಗಿನ ಉಡುಪಿ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯಕ್ ಅವರು, 2013ರ ಡಿಸೆಂಬರ್ 1ರಂದು ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ, 2014ರ ಫೆಬ್ರವರಿ 14ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಪ್ರಕರಣದ ಆರೋಪಿ ಯೋಗೀಶ್ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ. ಪಕ್ಕದ ಮನೆಯಲ್ಲಿ ವಾಸವಾಗಿದ್ದ ರಂಜಿತಾ ಎಂಬಾಕೆಯನ್ನು ವಿವಾಹವಾಗಲು ಬಯಸಿದ್ದನು. ಯುವತಿ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭ ಆತ ಆಕೆಗೆ ಕಿರುಕುಳ ನೀಡುತ್ತಿದ್ದ. ಇದನ್ನು ರಂಜಿತಾ ವಿರೋಧಿಸಿದ ರಂಜಿತಾಳಿಗೆ ಆತ ಬೆದಿರಿಕೆ ಹಾಕಿದ್ದ. ಈ ಬಗ್ಗೆ ರಂಜಿತಾ 2013ರ ಸೆಪ್ಟೆಂಬರ್ 29ರಂದು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ರಂಜಿತಾ ದೂರು ನೀಡಿದ್ದರ ಬಗ್ಗೆ ಕೋಪಗೊಂಡ ಯೋಗೀಶ್ 2013 ರ ನವೆಂಬರ್ 27 ರಂದು ಬೆಳಿಗ್ಗೆ 9.30 ರ ಸುಮಾರಿಗೆ ತನ್ನ ಸ್ನೇಹಿತರೊಂದಿಗೆ ರಂಜಿತಾ ಮಾತನಾಡುತ್ತಿದ್ದ ಸಂದರ್ಭ ಯೋಗೀಶ್ ಆಕೆಯ ಬೆನ್ನುಗೆ ಚೂರಿಯಿಂದ ತಿವಿದು ಹತ್ಯೆ ಮಾಡಿದ್ದ. ಆತನ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶ ಸುಬ್ರಹ್ಮಣ್ಯ ಜೆ ಅವರು, ಹಲವು ಸಾಕ್ಷ್ಯಗಳನ್ನು ವಿಚಾರಣೆ ನಡೆಸಿದ ಬಳಿಕ ಆರೋಪಿಯ ವಿರುದ್ದ ಆರೋಪ ಸಾಬೀತಾಗಿದ್ದು, ಸೆಪ್ಟೆಂಬರ್ 14 ರಂದು ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದು, ಆರೋಪಿಗೆ ಸೆ.16ರಂದು ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಆರೋಪಿಗೆ ಜಾಮೀನು ಸಿಗದ ಹಿನ್ನೆಲೆ, ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ. ಅಭಿಯೋಜನೆ ಪರ ಜಿಲ್ಲಾ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದಿಸಿದ್ದರು.