ಮಂಗಳೂರು, ಸೆ. 16 (DaijiworldNews/SM): ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ದ.ಕ. ಜಿಲ್ಲೆಯಲ್ಲಿ ಕೊರೊನಾ ವರದಿ ನೀಡದ ವೈದ್ಯರು ಸರಕಾರಕ್ಕೆ ಸವಾಲೆಸೆದಿದ್ದಾರೆ. ಪ್ರತಿದಿನ ನೀಡುತ್ತಿದ್ದ ಕೊರೊನಾ ವರದಿಯನ್ನು ವೈದ್ಯರು ನೀಡದೆ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಿಲ್ಲೆಯ ಕೊರೊನಾ ವರದಿ ನೀಡುತ್ತಿತ್ತು. ಅಲ್ಲದೆ, ರಾಜ್ಯದಿಂದಲೂ ಕೊರೋನಾ ವರದಿ ಪ್ರಕಟವಾಗುತ್ತಿತ್ತು. ಸೋಂಕಿತರ ಸಂಖ್ಯೆ, ಗುಣಮುಖರಾದವರ ಸಂಖ್ಯೆ ಇನ್ನಿತರ ಸೋಂಕಿತರ ವಿಸ್ತಾರ ವರದಿ ನೀಡಲಾಗುತ್ತಿತ್ತು. ಆದರೆ, ಇವತ್ತಿನಿಂದ ವೈದ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ.
ವೈದ್ಯರ ಬೇಡಿಕೆಗಳಿಗೆ ಸ್ಪಂದಿಸಲು ಸರಕಾರಕ್ಕೆ ವೈದ್ಯರು ಗಡುವು ನೀಡಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವರದಿ ಹಾಗೂ ಕೆಲವು ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.
ಪ್ರಸ್ತುತ ಕೋವೀಡ್ ಮತ್ತು ಕೋವಿಡೇತರ ವರದಿಯನ್ನು ವೈದ್ಯರು ಸ್ಥಗಿತಗೊಳಿಸಿದ್ದಾರೆ. ಅನ್ ಲೈನ್ ಸಹಿತ ವರದಿ ನೀಡುವಿಕೆ, ಸರಕಾರಿ ಸಭೆಗಳಿಗೆ ಗೈರಾಗುವ ನಿರ್ಧಾರವನ್ನು ವೈದ್ಯರು ಕೈಗೊಂಡಿದ್ದಾರೆ. ಸೆ.21ರೊಳಗೆ ಸರ್ಕಾರ ಸ್ಪಂದಿಸದಿದ್ದರೆ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆ ಸ್ಥಗಿತಗೊಳಿಸುವ ನಿರ್ಣಯವನ್ನು ವೈದ್ಯರು ಕೈಗೊಂಡಿದ್ದಾರೆ.