ಮಂಗಳೂರು, ಸೆ 16 (DaijiworldNews/PY): ಕೊರೊನಾ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯ ಕುರಿತ ಚರ್ಚಾ ಕಾರ್ಯಕ್ರಮವನ್ನು ಸೆ.16ರ ಬುಧವಾರದಂದು ಟೌನ್ ಹಾಲ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಉದ್ಘಾಟಿಸಿದರು.
ವೆನ್ಲಾಕ್ ಆಸ್ಪತ್ರೆಯ ಜೊತೆ ಜಿಲ್ಲಾಡಳಿತ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಮತ್ತು ಮಂಗಳೂರು ನಗರ ನಿಗಮ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು, ಕೊರೊನಾ ಪ್ರಕರಣ ಹಾಗೂ ಸಾವಿನ ಪ್ರಮಾಣದಿಂದ ಜನರು ಭಯಭೀತರಾಗಿದ್ದಾರೆ. ಅಲ್ಲದೇ, ಈ ನಡುವೆ ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಯೋಜನ ಪಡೆಯುವ ಬಗ್ಗೆ ಆಸ್ಪತ್ರೆಗಳಲ್ಲಿಯೂ ಗೊಂದಲವಿದೆ. ಈ ಯೋಜನೆಯು ಅಗತ್ಯವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲವನ್ನು ಹೋಗಲಾಡಿಸಲು ಹಾಗೂ ಜನರಿಗೆ ತಲುಪುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಪ್ರಮಾಣ 400 ದಾಟಿದ್ದು, ಇವುಗಳಲ್ಲಿ ಹೆಚ್ಚಿನವು ಮಂಗಳೂರು ನಗರ ಪಾಲಿಕೆಯ ಮಿತಿಯಲ್ಲಿದೆ. ಕೊರೊನಾವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಮುಖ್ಯ. ನಾವು ವಾರ್ಡ್-ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ಬೂತ್-ಲೆವೆಲ್ ಟಾಸ್ಕ್ ಫೋರ್ಸ್ ಅನ್ನು ರಚಿಸಿದ್ದೇವೆ. ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಸಾರ್ವಜನಿಕರಲ್ಲಿ ಗೊಂದಲವನ್ನು ತಪ್ಪಿಸಲು ನಾವು 25 ನೋಡಲ್ ಅಧಿಕಾರಿಗಳನ್ನು ಆಸ್ಪತ್ರೆಗಳಿಗೆ ನೇಮಿಸಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಬೇಕಾಗಿದೆ. ಅಲ್ಲದೇ, ಮೂಲಭೂತ ಅವಶ್ಯಕತೆಗಳತ್ತ ಗಮನಹರಿಸಲು ಮುಖ್ಯಮಂತ್ರಿಗಳು ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 17,776 ಕೊರೊನಾ ಪ್ರಕರಣಗಳು ದಾಖಲಾಗಿವೆ. ಆಯುಷ್ಮಾನ್ ಭಾರತ್ ಯೋಜನೆಗೆ ಎಂಟು ವೈದ್ಯಕೀಯ ಕಾಲೇಜುಗಳಿಗೆ ಹಾಗೂ 12 ಖಾಸಗಿ ಆಸ್ಪತ್ರೆಗಳಿಗೆ ಅನ್ವಯಿಸುತ್ತದೆ. ಈಗಾಗಲೇ ಇತರ 12 ಆಸ್ಪತ್ರೆಗಳು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಿವೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಕೆಲವು ದಾಖಲೆಗಳನ್ನು ಹೊಂದಿರುವ ಯಾವುದೇ ರೋಗಿಗೆ ಕೊರೊನಾ ಸೋಂಕಿಗೆ ಉಚಿತ ಚಿಕಿತ್ಸೆ ನೀಡಬೇಕು. ಯಾವುದೇ ಲೋಪಗಳು ಕಂಡುಬಂದಲ್ಲಿ ಅಥವಾ ಹೆಚ್ಚು ಹಣ ಪಡೆಯುವ ದೂರುಗಳಿದ್ದಲ್ಲಿ, ನಾವು ಖಂಡಿತವಾಗಿಯೂ ತನಿಖೆ ನಡೆಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿಯೊಬ್ಬ ಕೊರೊನಾ ರೋಗಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ವಾರ್ಡ್ ಮಟ್ಟದಿಂದ ಸಾಕಷ್ಟು ದೂರುಗಳು ಬಂದಿವೆ, ಏಕೆಂದರೆ ಅವರಿಗೆ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿದಿಲ್ಲ. ಸಮಸ್ಯೆಯನ್ನು ಪರಿಹರಿಸಲು ನೋಡಲ್ ಅಧಿಕಾರಿಗಳ ಸಂಪರ್ಕದೊಂದಿಗೆ ಆಸ್ಪತ್ರೆಗಳ ಮಾಹಿತಿಯೊಂದಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ನೋಡಲ್ ಅಧಿಕಾರಿಗಳು ಕರೆಗಳನ್ನು ಸ್ವೀಕರಿಸಬೇಕು ಮತ್ತು ಅವರಿಗೆ ಪ್ರತಿಕ್ರಿಯಿಸಬೇಕು. ಒಂದು ವೇಳೆ ಅವರು ಪ್ರತಿಕ್ರಿಯಿಸುವಲ್ಲಿ ವಿಫಲವಾದರೆ ನಾವು ಅದನ್ನು ಪರಿಶೀಲಿಸುತ್ತೇವೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಹೇಳಿದರು.
ಈ ಸಂದರ್ಭ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಶಾಸಕ ಡಾ.ಭಾರತ್ ವೈ ಶೆಟ್ಟಿ, ಡಿಸಿಪಿ ಅರುಣಶುಗಿರಿ, ಮೇಯರ್ ದಿವಾಕರ್, ಉಪ ಮೇಯರ್ ವೇದಾವತಿ, ಜಿಲ್ಲಾ ಪಂಚಾಯತ್ ಸಿಇಒ ಡಾಸೆಲ್ವಮಣಿ ಉಪಸ್ಥಿತರಿದ್ದರು.