ಮಂಗಳೂರು, ಸೆ. 16 (DaijiworldNews/MB) : ರಾಜ್ಯದ ಬಿಜೆಪಿ ಸರ್ಕಾರ ಅಟೆನ್ಶನ್ ಡೈವರ್ಷನ್ ಸರ್ಕಾರ ಎಂದು ಮಾಜಿ ಸಚಿವ, ಶಾಸಕ ಯು ಟಿ ಖಾದರ್ ಅವರು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ''ರಾಜ್ಯದ ಬಿಜೆಪಿ ಸರ್ಕಾರ ಒಂದು ಅಟೆನ್ಶನ್ ಡೈವರ್ಷನ್ ಸರ್ಕಾರ. ಕೊರೋನಾ ಹಾವಳಿ, ಪ್ರವಾಹ ಸಂಕಷ್ಟ, ರೈತ ವಿರೋಧಿ ಎಪಿಎಎಂಸಿ ಜನಕಾಯ್ದೆ ತಿದ್ದುಪಡಿ, ಶ್ರಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡಿಗಳ ಬಗ್ಗೆ ಚರ್ಚಿಸೋ ಬದಲು, ಡ್ರಗ್ಸ್ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ನಡೆಸಿ ಮಾಫಿಯಾ ಮಟ್ಟ ಹಾಕಲು ನಾರ್ಕೋಟಿಕ್ ಸೆಲ್ ಹಾಗೂ ಕಾನೂನು ಇನ್ನಷ್ಠು ಬಲಿಷ್ಠಗೊಳಿಸೋ ಬದಲು ರಾಜಕೀಯ ಲಾಭಕ್ಕಾಗಿ ಹಿಟ್ ಅಂಡ್ ರನ್ ಕೇಸ್ ರೀತಿ ವರ್ತಿಸುತ್ತಿದೆ. ತನ್ನ ವೈಫಲ್ಯಗಳನ್ನ ಮುಚ್ಚಿಡಲು ವಿಪಕ್ಷ ಮುಖಂಡರುಗಳ ಮೇಲೆ ಗೂಬೆ ಕೂರಿಸಲು ಮುಂದಾಗಿದೆ'' ಎಂದು ರಾಜ್ಯ ಸರ್ಕಾರದ ವಿರುದ್ದ ಆರೋಪ ಮಾಡಿರುವ ಅವರು ''ಈ ಮೂಲಕ ಅಧಿವೇಶನ ಆರಂಭವಾಗುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ'' ಎಂದು ಕೂಡಾ ಹೇಳಿದ್ದಾರೆ.