ಉಡುಪಿ, ಸೆ. 16 (DaijiworldNews/MB) : ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಉಡುಪಿಯ 63 ವರ್ಷದ ಮಹಿಳೆಯನ್ನು ಕುವೈತ್ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುವೈತ್ನಲ್ಲಿ ಮನೆ ಕೆಲಸವನ್ನು ಮಾಡುತ್ತಿದ್ದ ಮಹಿಳೆ ತನ್ನ ತಾಯ್ನಾಡಿಗೆ ವಾಪಾಸ್ ಬರಲಿದ್ದು ವಿಮಾನ ನಿಲ್ದಾಣದಲ್ಲಿದ್ದಾಗ ನಿಗೂಢವಾಗಿ ನಾಪತ್ತೆಯಾಗಿದ್ದರು.
ಮಹಿಳೆ ಟಿಕೆಟ್ ಹೊಂದಿದ್ದು ವಿಮಾನ ನಿಲ್ದಾಣದ ಬೋರ್ಡಿಂಗ್ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಎಮಿಗ್ರೆಷನ್ ಕ್ಲಿಯರೆನ್ಸ್ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಇದ್ದಕ್ಕಿದ್ದಂತೆ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಮಿಗ್ರೆಷನ್ ಕ್ರಿಯರೆನ್ಸ್ ವೇಳೆ ಕೆಲವು ಅಡೆತಡೆಗಳನ್ನು ಎದುರಿಸಿದೆ ಎಂದು ಮಹಿಳೆ ಕುವೈತ್ ವಿಮಾನ ನಿಲ್ದಾಣದಿಂದ ತನ್ನ ಪುತ್ರಿಗೆ ತಿಳಿಸಿದ್ದರು. ಆದರೆ ಬಳಿಕ ತಾಯಿ ಸಂಕರ್ಪಕಕ್ಕೆ ದೊರಕದ ಕಾರಣ ಪುತ್ರಿಯು ಸಾಮಾಜಿಕ ಜಾಲತಾಣದಲ್ಲಿ ನನ್ನ ತಾಯಿ ನಾಪತ್ತೆಯಾಗಿದ್ದಾರೆ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆಡಿಯೋ ಅಪ್ಲೋಡ್ ಮಾಡಿ ಹಾಯವನ್ನು ಕೋರಿದ್ದರು.
ಈ ಬಗ್ಗೆ ತಿಳಿದ ಕೆಲವು ಮುಖಂಡರು ಮಹಿಳೆಯ ಬಗ್ಗೆ ಮಾಹಿತಿ ಪಡೆದು ಅವರು ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿಸಿದರು.
ತಾಯಿಯನ್ನು ಏಕೆ ಬಂಧಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಆತಂಕದಲ್ಲಿರುವ ಮಹಿಳೆಯ ಪುತ್ರಿಯು ಎನ್ಆರ್ಐ ಫೋರಂ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಆರತಿಯವರು ಕುವೈತ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಿದ್ದು ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ ಮಹಿಳೆಯನ್ನು ವಾಪಾಸ್ ಕಳುಹಿಸುವಂತೆ ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ.