ಮಂಗಳೂರು, ಸೆ.15 (DaijiworldNews/SM): ಕರಾವಳಿಯ ಹೆಸರು ಕೇಳಿದ ತಕ್ಷಣ ನೆನಪಾಗುವುದು ಮತ್ಯೋದ್ಯಮ. ಮೀನುಗಾರಿಗೆ ಕರಾವಳಿಯ ಉದ್ಯಮಗಳಲ್ಲಿ ಪ್ರಮುಖವಾಗಿ ಗೋಚರಿಸುತ್ತದೆ. ಆದರೆ, ಇದರ ಹಿಂದೆ ಕಡಲ ಮಕ್ಕಳು ಸಾಕಷ್ಟು ಶ್ರಮ ವಹಿಸುತ್ತಾರೆ. ಕೊಟ್ಯಾಂತರ ರೂಪಾಯಿಯ ಮೀನು ಭಾರತದಿಂದ ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ. ಸದ್ಯ ಕೊರೋನಾ ಹೊಡೆತದಿಂದ ಮೀನುಗಾರರು ಕಂಗಾಲಾಗಿದ್ದಾರೆ. ಇದರ ನಡುವೆ ಇದೀಗ ಉಭಯ ದೇಶಗಳ ಶೀತಲ ಸಮರದಿಂದ ಮೀನುಗಾರರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯದಿಂದ ವರ್ಷಂಪ್ರತಿ ಸುಮಾರು 1 ಸಾವಿರ ಕಂಟೈನರ್ ಗಳ ಮೂಲಕ ಚೀನಾಕ್ಕೆ ಮೀನು ರಫ್ತು ಮಾಡಲಾಗುತ್ತಿತ್ತು. ಒಂದು ಕಂಟೈನರ್ ನಲ್ಲಿ ಬೇರೆ ಬೇರೆ ಪ್ರಬೇಧದ ಸರಿಸುಮಾರು 25 ಟನ್ ಮೀನು ಇರುತ್ತದೆ. ಆದರೆ, ಕೊರೋನಾ ಆರಂಭಗೊಂಡ ಬಳಿಕ ಮೀನಿಗೆ ಬೇಡಿಕೆ ಕಡಿಮೆಯಾಗಿದ್ದು, ವಿದೇಶಿ ರಫ್ತಿನ ಮೇಲೆ ಭಾರೀ ಹೊಡೆತ ಬಿದ್ದಿದೆ.
ಚೀನಾ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಗೆ ಮೀನು ರಫ್ತು ಮಾಡಲಾಗುತ್ತಿದ್ದು, ಕಳೆದ ವರ್ಷ 1600 ಕೋ.ರೂಪಾಯಿ ಮೌಲ್ಯದ ಮೀನು ರಫ್ತಾಗಿದೆ. ಆದರೆ ಯಾವಾಗ ಕೊರೋನಾ ವೈರಸ್ ಕಾಟ ಆರಂಭವಾಯಿತೋ ಮೀನು ರಫ್ತಿನ ಮೇಲೆ ಭಾರಿ ಹೊಡೆತವೇ ಬಿದ್ದಿದೆ. ರಫ್ತಾಗುತ್ತಿದ್ದುದು ಸಂಪೂರ್ಣ ಸ್ಥಗಿತಗೊಂಡಿದೆ. ಶೇಖರಿಸಿಟ್ಟ ಮೀನು ರಫ್ತಾಗದೆ ಮೀನುಗಾರರಿಗೆ ಭಾರೀ ನಷ್ಟವಾಗಿದೆ. ಮತ್ತೊಂದೆಡೆ ಕಾರ್ಮಿಕರ ನಿರ್ವಹಣೆಯ ಹೊಣೆಯನ್ನು ಕೂಡ ಮಾಲಕರೇ ನೋಡಿಕೊಂಡಿರುವ ಕಾರಣ ಮತ್ತಷ್ಟು ನಷ್ಟ ಉಂಟಾಗಿದೆ. ಸದ್ಯ ಭಾರತ-ಚೀನಾ ನಡುವಿನ ಸಂಬಂಧ ವಿಷಮವಾಗಿದ್ದು, ಮೀನು ರಫ್ತಾಗುವ ಮೇಲೆ ಏಟಾಗುವುದೇ ಎಂಬ ಚಿಂತೆ ಕಾಡಲಾರಂಭಿಸಿದೆ.
ಮಂಗಳೂರಿನಲ್ಲಿ ಮೀನು ರಫ್ತು ಮಾಡುವ 12 ಕಾರ್ಖಾನೆಗಳಿವೆ. ಉಡುಪಿಯಲ್ಲಿ 10 ರಫ್ತು ಘಟಕಗಳಿವೆ. ಹೀಗಾಗಿ ಚೀನಾವನ್ನೇ ಅವಲಂಬಿಸಿದ್ದ, ಮಾರುಕಟ್ಟೆಗೆ ಕೊರೋನಾ ಹೊಡೆತ ನೀಡಿದೆ. ಈಗಾಗಲೇ ನಷ್ಟದಲ್ಲಿರುವ ಮೀನುಗಾರಿಕೆ ತಡವಾಗಿ ಆರಂಭವಾಗಿದ್ದರೂ ಕೂಡ ರಫ್ತು ಮಾತ್ರ ಇನ್ನೂ ಆರಂಭವಾಗಿಲ್ಲ. ಹೀಗಾಗಿ, ರಫ್ತು ಉದ್ಯಮಿಗಳ ಚಿತ್ತ ವಿದೇಶಿ ಮಾರುಕಟ್ಟೆಯದತ್ತ ನೆಟ್ಟಿದೆ. ಈಗಾಗಲೇ ನಷ್ಟದಲ್ಲಿರ್ವ ಉದ್ಯಮ ನೆಲ ಕಚ್ಚದೇ ಇರಬೇಕಾಗಿದ್ದರೆ, ರಫ್ತು ವಹಿವಾಟು ಶಿಘ್ರದಲ್ಲೇ ಆರಂಭಗೊಳ್ಳಬೇಕಾಗಿದೆ.
ಒಂದು ಕಡೆ ಚೀನಾಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಚೀನಾ ವಸ್ತುಗಳನ್ನು ಚೀನಾ ಆಪ್ ಬ್ಯಾನ್ ಮಾಡುವ ನಿರ್ಧಾರ ಭಾರತ ಸರಕಾರ ಕೈಗೊಳ್ಳುತ್ತಿದೆ. ಇದಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಚೀನಾ ಮೀನುಗಾರಿಕಾ ಆಮದನ್ನು ನಿಲ್ಲಿಸಿದ್ದೇ ಆದಲ್ಲಿ, ಕರಾವಳಿಯ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ.