ಮಂಗಳೂರು, ಸೆ.15 (DaijiworldNews/SM): ಕೊರೋನಾ ಕಾರಣದಿಂದಾಗಿ ಮಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಈ ಹಿಂದೆ ಆಗಮಿಸುತ್ತಿದ್ದ ವಿಮಾನಗಳು ರದ್ದಾಗಿವೆ. ಆದರೆ, ನೆರೆಯ ರಾಜ್ಯ ಕೇರಳದ ಕಣ್ಣೂರಿನಲ್ಲಿ ಇತ್ತೀಚಿಗೆ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಮಾನಗಳು ಆಗಮಿಸುತ್ತಿವೆ ಎನ್ನುವ ಆರೋಪವಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೂ ಹೆಚ್ಚಿನ ವಿಮಾನಗಳು ಆಗಮಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಯುವ ವಿಮಾನಯಾನ ಉತ್ಸಾಹಿ ಗಳಿಂದ ಟ್ವಿಟರ್ ಅಭಿಯಾನ ನಡೆದಿದೆ.
ಸೆಪ್ಟೆಂಬರ್ 15ರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಟ್ವಿಟರ್ ಅಭಿಯಾನ ನಡೆದಿದ್ದು, ಸುಮಾರು ೮೦೦ಕ್ಕೂ ಅಧಿಕ ಮಂದಿ ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ ಮಾಡಿದ್ದಾರೆ. ಫ್ಲೈ ಫ್ರಂ ಐ ಎಕ್ಸ್ ಇ ಮೂಲಕ ಟ್ವಿಟರ್ ಅಭಿಯಾನ ನಡೆದಿದೆ.
ಕೋವಿಡ್ ನಂತರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳ ಸಂಖ್ಯೆ ಕಡಿಮೆಯಾಗಿದೆ. ನೆರೆಯ ರಾಜ್ಯ ಕೇರಳದ ಕಣ್ಣೂರಿನಲ್ಲಿ ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲೆಯೆತ್ತಿದ್ದು, ಅಲ್ಲಿಗೆ ವಿಮಾನಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಮಂಗಳೂರಿನಿಂದ ಬೆರಳೆಣಿಕೆಯ ವಿಮಾನಗಳ ನಿರ್ವಹಣೆ ಮಾಡಲಾಗುತ್ತಿದೆ. ಮಂಗಳೂರಿಗೂ ಅಧಿಕ ಸಂಖ್ಯೆಯಲ್ಲಿ ಮತ್ತೆ ವಿಮಾನಗಳಾ ಹಾರಾಟವನ್ನು ಆರಂಭಿಸಬೇಕೆಂಬ ಒತ್ತಾಯವನ್ನು ಅಭಿಯಾನದಲ್ಲಿ ಭಾಗವಹಿಸಿದವರು ಮಾಡಿದ್ದಾರೆ.
ಅಲ್ಲದೆ, ವಿಮಾನಯಾನ ಸಚಿವರಾದ ಹರ್ ದೀಪ್ ಸಿಂಗ್ ಪುರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ವಿಮಾನಯಾನ ಕಂಪನಿಗಳಿಗೆ ಟ್ವಿಟರ್ ನಲ್ಲಿ ಟ್ಯಾಗ್ ಮಾಡಲಾಗಿದೆ.