ಪಡುಬಿದ್ರಿ, ಸೆ.15 (DaijiworldNews/SM): ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ಸದ್ಯ ಸುಸ್ಥಿತಿಯಲ್ಲಿದೆ. ಪಡುಬಿದ್ರಿ- ತೆಂಕ ಎರ್ಮಾಳಿನ ಗಡಿಭಾಗದಲ್ಲಿರುವ ಕಲ್ಸಂಕ ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಸಂಚಾರ ನಡುಸುವ ವಾಹನ ಸವಾರರು ಆಡಳಿತ ವ್ಯವಸ್ಥೆಯನ್ನು ಟೀಕಿಸುತ್ತಾರೆ. ಜನನಾಯಕರಿಗೆ ಹಿಡಿ ಶಾಪ ಹಾಕುತ್ತಾರೆ.
ಕಳೆದ ಏಳು ವರ್ಷಗಳಿಂದ ಪಡುಬಿದ್ರಿ- ತೆಂಕ ಎರ್ಮಾಳಿನ ಗಡಿಭಾಗದಲ್ಲಿರುವ ಕಲ್ಸಂಕ ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. 8 ವರ್ಷಗಳ ಹಿಂದೆ ಪಡುಬಿದ್ರಿ ಕಲ್ಸಂಕ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತ್ತು. ಆದರೆ ನೂತನ ಸೇತುವೆ ನಿರ್ಮಿಸುವ ಸುಸಂದರ್ಭ ಇಲ್ಲಿಯ ತನಕ ಕೂಡಿ ಬಂದಿಲ್ಲ. ಹೆದ್ದಾರಿ ಗುತ್ತಿಗೆ ಪಡೆದುಕೊಂಡಿರುವ ನವಯುಗ ಕಂಪನಿ ಕಳೆದ ಎಂಟು ವರ್ಷಗಳಿಂದ ಈ ಕಾಮಗಾರಿಯನ್ನು ಮಾಡುತ್ತಿದ್ದರೂ, ಅಪೂರ್ಣವಾಗಿಯೇ ಉಳಿದಿದೆ. ಕಲ್ಸಂಕ ಸೇತುವೆ ಪೂರ್ಣಗೊಳ್ಳದಿರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಈ ಭಾಗದಲ್ಲಿ ಅವ್ಯವಸ್ಥೆಯಿಂದ ಕೂಡಿದ ಸಂಪರ್ಕ ರಸ್ತೆಯನ್ನು ನಿರ್ಮಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ರಸ್ತೆಯಲ್ಲಿ ಬೃಹತ್ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ಮರಣ ಮೃದಂಗ ಬಾರಿಸುತ್ತಿವೆ. ಪ್ರತಿನಿತ್ಯ ಸಂಚರಿಸುವ ವಾಹನಗಳಿಗೆ ಹಾನಿಯಾಗುತ್ತಿರುವ ಘಟನೆಗಳು ಇಲ್ಲಿ ನಡೆಯುತ್ತಿರುತ್ತವೆ. ಅಲ್ಲದೆ, ಅಸಮರ್ಪಕವಾಗಿ ರಸ್ತೆ ವಿಭಜಿಸಿರುವುದರ ಪರಿಣಾಮ ಹಲವಾರು ಅಪಘಾತಗಳು ಈ ಭಾಗದಲ್ಲಿ ಸಂಭವಿಸಿವೆ.
ಸೇತುವೆ ನಿರ್ಮಾಣ ಮಡಲು ಹಣದ ಅಡಚಣೆ ಇದ್ದು, ಟೋಲ್ಗೇಟ್ ವಸೂಲಿಗೆ ಅವಕಾಶ ನೀಡಿದಲ್ಲಿ ಸಮಯಕ್ಕೆ ಸರಿಯಾಗಿ ಸೇತುವೆ ನಿರ್ಮಾಣ ಮಾಡುತ್ತೇವೆಂದು ನವಯುಗ್ ಕಂಪನಿ ಹೇಳಿದ ಪರಿಣಾಮ ಜಿಲ್ಲಾಡಳಿಯ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿತ್ತು. ಟೋಲ್ ಪ್ರಾರಂಭವಾಗಿ ಮೂರ್ನಾಲ್ಕು ವರ್ಷ ಸಂದರೂ, ಪಡುಬಿದ್ರಿ ಸೇತುವೆ ಪೂರ್ಣಗೊಂಡಿಲ್ಲ. ವಾಹನ ಸವಾರರಿಗೆ ಸಂಕಟ ತಪ್ಪಿಲ್ಲ. ಆದರೆ, ನವಯುಗ ಕಂಪನಿ ತೆಪ್ಪಗೆ ಟೋಲ್ ಕಲೆಕ್ಷನ್ನಲ್ಲಿ ಬ್ಯುಸಿ ಆಗಿದೆ.
ಕಳೆದ ವರ್ಷ ಸೇತುವೆಯ ಒಂದು ಪಾರ್ಶ್ವವನ್ನಷ್ಟೇ ಮಾಡಿ ಕೈತೊಳೆದುಕೊಂಡ ನವಯುಗ ಕಂಪನಿ ಮತ್ತೆ ಕಾಮಗಾರಿಯನ್ನು ಮುಂದುವರಿಸಿಲ್ಲ. ಕಾಮಗಾರಿ ಸಂಪೂರ್ಣಗೊಂಡ ಭಾಗದಲ್ಲಿ ವಾಹನ ಸಂಚಾರ ಆರಂಭಗೊಂಡ ಒಂದೆರಡು ದಿನಗಳಲ್ಲೇ ಆ ಕಾಮಗಾರಿಯ ಮದ್ಯದಲ್ಲಿಯೇ ಕುಸಿತ ಕಂಡಿದ್ದು, ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಕಳೆದ ಬಾರಿ ಕುಸಿತಗೊಂಡ ಜಾಗದಲ್ಲಿ ಮತ್ತೆ ಕುಸಿತ ಕಂಡಿದೆ. ಸೇತುವೆಯ ಮುಂಭಾಗದಿಂದ ಪ್ರಾರಂಭಗೊಂಡು ತೆಂಕ ಎರ್ಮಾಳು ನಾರಳ್ತಾಯ ದೈವಸ್ಥಾನದ ವರೆಗೂ ಬೃಹತ್ ಹೊಂಡ ಗುಂಡಿಗಳು ನಿರ್ಮಾಣಗೊಂಡಿವೆ. ಹೆಚ್ಚಿನ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಅಂತಿಮ ಹಂತಕ್ಕೆ ತಲಪಿದ್ದರೂ, ಪಡುಬಿದ್ರಿಗೆ ಮಾತ್ರ ಗಗನ ಕುಸುಮವಾಗಿದೆ.
ಇದೇ ಭಾಗದಲ್ಲಿ ಸಂಸದರು, ಸಚಿವರು, ಸ್ಥಳೀಯ ಶಾಸಕರು ಪ್ರತಿನಿತ್ಯ ಸಂಚಾರ ನಡೆಸುತ್ತಿದ್ದರೂ ತುಟಿ ಪಿಟಿಕ್ ಅನ್ನುತ್ತಿಲ್ಲ. ತಮಗೂ ಈ ಸಮಸ್ಯೆಗೂ ಯಾವುದೇ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ತಾವೇ ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡ ಬಳಿಕವೂ ಪರಿಹಾರ ಒದಗಿಸದಿದ್ದಲ್ಲಿ, ಇತರ ಸಮಸ್ಯೆಗಳ ಪಾಡೇನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.