ಕೊಲ್ಲೂರು, ಸೆ. 15 (DaijiworldNews/MB) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟಕ್ಕೆ ಸುಲಭ ಸಂಪರ್ಕ ಕಲ್ಪಿಸುವ ರೋಪ್ ವೇ ಯೋಜನೆಯ ಡಿಪಿಆರ್ಗೆ ಚಾಲನೆ ನೀಡುವ ಕಾರ್ಯಕ್ರಮ ಸೆ.15ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯಿತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ದೀಪ ಬೆಳಗಿಸಿ ಡಿಪಿಆರ್ ತಯಾರಿಗೆ ಚಾಲನೆ ನೀಡಿ ಮಾತನಾಡಿ, ಇದು ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ನಾನು ಈ ಹಿಂದೆಯೇ ಕೊಡಚಾದ್ರಿ ಬೆಟ್ಟಕ್ಕೆ ರೋಪ್ ವೇ ಕಲ್ಪಿಸುವ ಬಗ್ಗೆ ಕನಸು ಕಂಡಿದ್ದೆ. ಅದಕ್ಕೀಗ ಸಂಸದ ಬಿ.ವೈ ರಾಘವೇಂದ್ರ ಅವರು ಜೀವ ನೀಡುತ್ತಿದ್ದಾರೆ. 6-8 ಕಿ.ಮೀ ಉದ್ದ ಇರುವ ಈ ರೋಪ್ ವೇ ಭಾರತದಲ್ಲಿಯೇ ಅತೀ ಉದ್ದವಾದ ರೋಪ್ವೇ ಎನಿಸಿಕೊಳ್ಳಲಿದೆ. ಯುರೋಪಿಯನ್ ಮಾದರಿಯಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಇದರಿಂದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಭಾಗದ ಅಭಿವೃದ್ದಿಗೂ ಪೂರಕವಾಗಲಿದೆ ಎಂದರು.
ರೋಪ್ವೇ ನಿರ್ಮಾಣದಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅರಣ್ಯಕ್ಕೂ ಸಮಸ್ಯೆಯಾಗುವುದಿಲ್ಲ. ಕೊಡಚಾದ್ರಿಯ ಅದ್ಬುತ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತದೆ. ಕೊಡಚಾದ್ರಿ, ಸರ್ವಜ್ಞ ಪೀಠವನ್ನು ಎಲ್ಲರೂ ನೋಡಲು ಅನುಕೂಲವಾಗುತ್ತದೆ ಎಂದು ಹೇಳಿದ ಅವರು, ರೋಪ್ ವೇ ಆಗುವುದರಿಂದ ಜೀಪ್ ಚಾಲಕರು ಮಾಲಕರು ಆತಂಕ ಪಡಬೇಕಾಗಿಲ್ಲ. ರೋಪ್ ವೇ ಸ್ಥಳದ ತನಕ ಹೋಗಲು ಜೀಪ್ಗಳ ಅವಶ್ಯಕತೆ ಇರುತ್ತದೆ. ಪ್ರವಾಸೋಧ್ಯಮ ಅಭಿವೃದ್ದಿವಾದಂತೆ ಅವಕಾಶಗಳು ಸೃಷ್ಟಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಇಂಜಿನಿಯರ್ ರಾಜೇಶ ಪ್ರಸಾದ್, ಎಸ್.ಬಿ.ಆರ್ ಪಾಟೀಲ್, ಉದ್ಯಮಿ ವೆಂಕಟೇಶ್ ಕಿಣಿ, ಸ್ಥಳೀಯ ಪ್ರಮುಖರಾದ ಡಾ|ಅತುಲ್ ಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು, ಕಳಿ ಚಂದ್ರಯ್ಯ ಆಚಾರ್ಯ, ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಚಕ ವೃಂದದವರು ಉಪಸ್ಥಿತರಿದ್ದರು.
ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಈ ರೋಪ್ ವೇ ಯೋಜನೆ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯುಪಿಐಎಲ್ ಸಂಸ್ಥೆ ಮೂಲಕ ಅನುಷ್ಠಾನವಾಗಲಿದೆ. ಶೀಘ್ರ ಕಾಮಗಾರಿ ನಡೆದು, ರೋಪ್ ವೇ ಕಾರ್ಯರಂಭ ಮಾಡಲಿದೆ.