ಉಡುಪಿ, ಸೆ 15 (DaijiworldNews/PY): ಬೆಲ್ಲಂಪಳ್ಳಿ ಗ್ರಾಮದ ಹಿರಿಯಡ್ಕದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲು ಬಂದ ಆರೋಗ್ಯ ಕಾರ್ಯಕರ್ತರಿಗೆ ವ್ಯಕ್ತಿಯೋರ್ವ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ.
ಆರು ಮಂದಿ ಇದ್ದ ಆರೋಗ್ಯ ಕಾರ್ಯಕರ್ತರ ಗುಂಪೊಂದು ಸುರೇಂದ್ರ ಎಂಬವರ ಮನೆಗೆ ಗಂಟಲು ದ್ರವ ಪರೀಕ್ಷೆ ಮಾಡಲು ತೆರಳಿದ್ದರು. ಈ ಹಿಂದೆ ಸುರೇಂದ್ರ ಎಂಬವರ ಪತ್ನಿಗೆ ಕೊರೊನಾ ದೃಢಪಟ್ಟಿದ್ದು, ಮಂಗಳವಾರ ಪರೀಕ್ಷೆ ಮಾಡಿಸಬೇಕಿತ್ತು.
ಕಿರಿಯ ಮಹಿಳಾ ಸಹಾಯಕಿ ವಸಂತಿ ಎಸ್, ಪ್ರಯೋಗ ಶಾಲೆಯ ಸಿಬ್ಬಂದಿ ಜ್ಯೋತಿ ಕಿರಣ್, ಕಾರು ಚಾಲಕ ಸಂತೋಷ್ ಸೇರಿದಂತೆ ಇತರೆ ಇಬ್ಬರು ಆರೋಗ್ಯ ಅಧಿಕಾರಿಗಳು ಸುರೇಂದ್ರ ಎಂಬವರ ಮನೆಗೆ ಗಂಟಲು ದ್ರವ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಸುರೇಂದ್ರ ಅವರು ಸ್ವ್ಯಾಬ್ ಸಂಗ್ರಹಿಸಲು ಆಕ್ಷೇಪ ವ್ಯಕ್ತಪಡಿಸಿದ್ದು ಅಲ್ಲದೇ, ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ವಸಂತಿ ಅವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೇಬಿ ಎಂಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರದಂದು ಬೇಬಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಅವರ ಪತಿ ಸುರೇಂದ್ರ ಅವರ ಗಂಟಲು ದ್ರವ ಪರೀಕ್ಷೆ ಮಾಡಲು ಮಧ್ಯಾಹ್ನದ ವೇಳೆಗೆ ತೆರಳಿದ್ದೆವು. ನಮ್ಮ ತಂಡದಲ್ಲಿ ಪ್ರಯೋಗ ಶಾಲೆಯ ಸಿಬ್ಬಂದಿ ಜ್ಯೋತಿ ಕಿರಣ್, ಡಿ ಗ್ರೂಪ್ ಸಿಬ್ಬಂದಿ ಪ್ರತಿಮಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕಲಾವತಿ, ಕಾರು ಚಾಲಕ ಸಂತೋಷ್ ಆಶಾ ಕಾರ್ಯಕರ್ತೆ ವಿಜಯ ಅವರಿದ್ದರು. ನಾವು ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭ ಬೇಬಿ ಅವರ ಪತಿ ಸುರೇಂದ್ರ ಅವರು ನಮ್ಮನ್ನು ಕಂಡು ನೀವು ನಮ್ಮ ಮನೆಗೆ ಯಾಕೆ ಬಂದಿದ್ದೀರಿ? ನೀವೆಲ್ಲಾ ಕೊರೊನಾ ವಿಷಯದಲ್ಲಿ ಹಣ ಗಳಿಸಿ ದೊಡ್ಡ ದೊಡ್ಡ ಮನೆ ಕಟ್ಟುತ್ತೀರಿ. ನಿಮಗೆಲ್ಲಾ ಖಾಯಿಲೆ ಬಂದು ನೀವು ಸಾಯುತ್ತೀರಿ. ನಿಮಗೆ ಹೊಡೆಯಲು ನಾನು ರಾಡ್ ತಂದಿಟ್ಟಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಗಲಾಟೆ ನಡೆದಿದ್ದು, ವಸಂತಿ ಅವರ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ ಎಂದು ವಸಂತಿ ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ದಾಯ್ಜಿವಲ್ಡ್ನೊಂದಿಗೆ ಮಾತನಾಡಿದ ವಸಂತಿ, ಈ ರೀತಿಯಾದ ಗಲಾಟೆಗಳು ನಡೆದರೆ ನಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ನಮಗೆ ಪೊಲೀಸ್ ಸಿಬ್ಬಂದಿಯ ಅಗತ್ಯವಿದೆ. ಇಂತಹ ಅನುಭವ ನನಗೆ ಯಾವುತ್ತೂ ಆಗಲಿಲ್ಲ. ಈ ಕೊರೊನಾದ ನಡುವೆ ನಮ್ಮ ಪ್ರಾಣವನ್ನು ಲೆಕ್ಕಿಸದೇ ನಾವು ಶ್ರಮಿಸುತ್ತಿದ್ದೇವೆ. ಆದರೆ, ಕೆಲವರು ನಮ್ಮ ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ನಾವು ಇದನ್ನು ನಮ್ಮ ಸೇವೆಯೆಂದು ಮಾಡುತ್ತಿದ್ದೇವೆ. ಈ ರೀತಿಯಾದ ಘಟನೆಗಳು ಪುನಃ ಆದರೆ, ನಾವು ನಮ್ಮ ಕರ್ತವ್ಯವನ್ನು ಹೇಗೆ ನಿಭಾಯಿಸುವುದು. ಇದು ಗಂಭೀರವಾದ ವಿಷಯವಾಗಿದೆ. ಅವರ ವಿರುದ್ದ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.