ಉಡುಪಿ, ಸೆ. 15 (DaijiworldNews/MB) : ಸೆಪ್ಟೆಂಬರ್ 13 ರ ಶನಿವಾರ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉಡುಪಿ ಮೂಲದ 63 ವರ್ಷದ ವೃದ್ದೆ ನಾಪತ್ತೆಯಾಗಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ವೃದ್ದೆಯು ಸಂಜೆ ವಿಮಾನ ನಿಲ್ದಾಣಕ್ಕೆ ತಲುಪಿದ್ದು ವಿಮಾನ ನಿಲ್ದಾಣದಲ್ಲಿ ಪಾಲಿಸಲಾಗುವ ವೀಸಾ ಹಾಗೂ ಬೋರ್ಡಿಂಗ್ನ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದರು. ಬಳಿಕ ಅವರು ಬೆಂಗಳೂರಿಗೆ ಇಂಡಿಗೊ ವಿಮಾನದಲ್ಲಿ ಸಂಚಾರ ಮಾಡಬೇಕಾಗಿತ್ತು. ಬೋರ್ಡಿಂಗ್ ಪಾಸ್ ಪಡೆದ ನಂತರ ಅವರು ಭಾರತದ ತನ್ನ ಸಂಬಂಧಿಕರಿಗೆ ಧ್ವನಿ ಸಂದೇಶವನ್ನು ಕಳುಹಿಸಿದ್ದಾರೆ ಎಂದು ತಿಳಿದುಬಂದಿದ್ದು ಅದರಲ್ಲಿ ಅವರು ಶೀಘ್ರದಲ್ಲೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಆದರೆ ಆ ಬಳಿಕ ಅವರು ಫೋನ್ನಲ್ಲಿ ಯಾವುದೇ ಸಂದೇಶಗಳಿಗೆ ಅಥವಾ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಸಂಬಂಧಿಕರು ವಿಮಾನಯಾನ ಸಂಸ್ಥೆಯನ್ನು ವಿಚಾರಿಸಿದಾಗ ಅವರು ವಿಮಾನವನ್ನು ಹತ್ತಿಲ್ಲ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಬಂಧಿಕರೋರ್ವರು, ಅವರ ಮೊಬೈಲ್ ಫೋನ್ ಇನ್ನೂ ಆನ್ ಆಗಿದೆ. ಕರೆ ಮಾಡಿದಾಗ ರಿಂಗ್ ಆಗುತ್ತದೆ. ಆದರೆ ಕರೆ ಸ್ವೀಕರಿಸುತ್ತಿಲ್ಲ. ಅವರಿಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಗಳಿರಲಿಲ್ಲ. ಕಳೆದ 28 ವರ್ಷಗಳಿಂದ ಅವರು ಕುವೈತ್ನಲ್ಲಿ ಮನೆ ಕೆಲಸವನ್ನು ಮಾಡುತ್ತಿದ್ದು, ಕೆಲವು ತಿಂಗಳುಗಳ ಹಿಂದೆ ಅವರು ತನ್ನ ಕೆಲಸವನ್ನು ಬಿಟ್ಟು ಭಾರತದಲ್ಲಿ ನೆಲೆಸಲು ನಿರ್ಧರಿಸಿದ್ದರು. ತನ್ನ ವೀಸಾ ರದ್ದತಿಯ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಅಂತಿಮಗೊಳಿಸಿದ ನಂತರ, ಭಾರತಕ್ಕೆ ವಾಪಾಸ್ ಬರಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಹಾಗೂ ಅವರಿಗೆ ಏನಾಯಿತು ಎಂದು ನಮಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನು ದಾಯ್ಜಿವಲ್ಡ್ ಕುವೈತ್ನ ಕೆಲವು ಸಾಮಾಜಿಕ ಸ್ವಯಂಸೇವಕರನ್ನು ಸಂಪರ್ಕಿಸಿದ್ದು, "ಭಾರತೀಯ ಮಹಿಳೆ ವಿಮಾನ ನಿಲ್ದಾಣದಿಂದ ಕಾಣೆಯಾದ ಸುದ್ದಿ ನಮಗೆ ದೊರೆತಿದೆ. ಅವರಿಗೆ ಏನಾಯಿತು ಎಂದು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಇಲ್ಲಿನ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಸಹಾಯ ಮಾಡುತ್ತಿದ್ದಾರೆ. ನಾವು ಅವರಿಗೆ ಏನಾಯಿತು ಎಂಬ ಮಾಹಿತಿಯನ್ನು ಕಲೆಹಾಕುತ್ತೇವೆ ಎಂಬ ಭರವಸೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.