ಮಂಗಳೂರು, ಸೆ. 15 (DaijiworldNews/MB) : ಮಂಗಳೂರು (ಉತ್ತರ) ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕರು ಅನಧಿಕೃತ ಮರಳುಗಾರಿಕೆಯನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಆರೋಪಿಸಿದ್ದಾರೆ.
ಮಂಗಳವಾರ ಸೆಪ್ಟೆಂಬರ್ 15 ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತನ್ನೀರುಬಾವಿ, ನಾಯರ್ ಕುದ್ರು, ಮೀನಕಾಲಿಯಾ, ಅಡ್ಯಾರ್ ಪಡೀಲ್, ಅದ್ಯಂಪಾಡಿ ಹಾಗೂ ಇತರೆ ಸ್ಥಳಗಳಲ್ಲಿ ಹೆಚ್ಚು ಅಕ್ರಮ ಮರುಳುಗಾರಿಕೆ ನಡೆಯುತ್ತಿದೆ ಎಂದು ಹೇಳಿದ್ದು ಇವೆಲ್ಲದರ ಬಗ್ಗೆ ಶಾಸಕರಿಗೆ ತಿಳಿದಿದೆ ಆದರೆ ಅವುಗಳನ್ನು ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ, ಪಚ್ಚನಾಡಿಯಲ್ಲಿನ ಸರ್ಕಾರಿ ಜಾಗದಲ್ಲಿ ಅನುಮತಿಯಿಲ್ಲದೆ ಮನೆ ನಿರ್ಮಿಸುವ ಪ್ರಯತ್ನ ನಡೆದಿದ್ದು, ಇದರ ಬಗ್ಗೆ ತಿಳಿದಿದ್ದರೂ ಕೂಡಾ ಶಾಸಕರು ಇದನ್ನು ತಡೆಹಿಡಿಯಲು ವಿಫಲರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಸ್ಥಳೀಯರು ಈ ಅಕ್ರಮ ನಿರ್ಮಾಣವನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸುತ್ತಿಲ್ಲ ಎಂದು ದೂರಿರುವ ಮಾಜಿ ಶಾಸಕರು, ಈ ಹಿಂದೆ ಪಚ್ಚನಾಡಿ ಸಂತೋಷ್ ನಗರ ಪ್ರದೇಶದಲ್ಲಿ ಪ್ರತಿದಿನವೂ ಕುಡಿಯುವ ನೀರು ದೊರೆಯುತ್ತಿತ್ತು. ಆದರೆ ಈಗ ಅನೇಕ ಸ್ಥಳಗಳಲ್ಲಿ ಕುಡಿಯುವ ನೀರು ಲಭ್ಯವಾಗುತ್ತಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಸಕರು ಮತ್ತು ಕಾರ್ಪೋರೇಟರ್ಗಳು ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಆರ್ಥಿಕ ಕುಸಿತದಿಂದಾಗಿ, ಬೈಕಾಂಪಡಿಯಲ್ಲಿನ ಅನೇಕ ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ತಿಳಿಸಿರುವ ಬಾವಾ ಅವರು, ಜೀವನ ಸಾಗಿಸಲು ಜನರು ತುಂಬಾ ಕಷ್ಟಪಡುತ್ತಿದ್ದರೂ ಸಹ, ಶಾಸಕರು ಈ ವಿಷಯ ತಿಳಿದಿದ್ದರೂ ಮೌನವಾಗಿದ್ದಾರೆ. ಇದರಿಂದಾಗಿ ಜನರ ಜೀವನವು ಅಸಹನೀಯವಾಗಿದೆ ಎಂದು ಹೇಳಿದರು.
ಹಾಗೆಯೇ ಮರಳು ಮಾಫಿಯಾವನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.