ಬಂಟ್ವಾಳ, ಸೆ.14 (DaijiworldNews/SM): ಐತಿಹಾಸಿಕ ಹಿನ್ನೆಲೆಯುಳ್ಳ ತುಳುನಾಡಿನ ಪ್ರಸಿದ್ಧ ಕಾರಣಿಕ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.
ಬಂಟ್ವಾಳ ವ್ಯಾಪ್ತಿಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದ ಹಾಗೂ ಜನರ ಮೆಚ್ಚುಗೆಗೆ ಪಾತ್ರವಾಗಿರುವ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿ ಆದೇಶ ನೀಡಿದೆ. ಕಳೆದ ಒಂದುವರೆ ವರ್ಷಗಳಿಂದ ಬಂಟ್ವಾಳ ತಾಲೂಕಿನ ತಹಶಿಲ್ದಾರ್ ಆಗಿದ್ದು ಕೊಂಡು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ರಶ್ಮಿ ಪಾತ್ರರಾಗಿದ್ದಾರೆ.
ಪಣೋಲಿಬೈಲು ಕ್ಷೇತ್ರದ ಬಗ್ಗೆ ಅಪಾರ ಭಕ್ತಿಯನ್ನು ರಶ್ಮಿ ಹೊಂದಿದ್ದಾರೆ. ಇದೀಗ ಕ್ಷೇತ್ರದ ಆಡಳಿತಾಧಿಕಾರಿಯಾಗುವ ಸೌಭಾಗ್ಯ ಅವರಿಗೆ ಲಭಿಸಿದೆ. ಇಲ್ಲಿ ರಶ್ಮಿಯವರು ಬಂಟ್ವಾಳ ತಾಲೂಕು ವ್ಯಾಪ್ತಿಯ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನನುರಾಗಿಯಾಗಿದ್ದಾರೆ. ನೆರೆ ಬಂದ ಸಂದರ್ಭ ರಾತ್ರೋ ರಾತ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಗಡಿ ಬಂದ್ ಆದಂತಹ ಸಂದರ್ಭದಲ್ಲಿ ಗಡಿ ಪ್ರದೇಶಗಳ ಜನತೆಯನ್ನು ಮನವರಿಕೆ ಮಾಡಿದ್ದು, ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮ ಹೀಗೆ ಹತ್ತು ಹಲವು ರೀತಿಯಲ್ಲಿ ದಕ್ಷ ಅಧಿಕಾರಿ ರಶ್ಮಿ ಅವರು ತಮ್ಮ ಸೇವೆ ಸಲ್ಲಿಸಿದ್ದಾರೆ.