ಮಂಗಳೂರು, ಸೆ.14(DaijiworldNews/HR): ಯಕ್ಷಗಾನವು ಸಾಕಷ್ಟು ಖರ್ಚು-ವೆಚ್ಚಗಳನ್ನು ಅಪೇಕ್ಷಿಸುವ ಕಲೆ ಎಂದು ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳಿದರು.
ಯಕ್ಷಗಾನ ಪ್ರದರ್ಶನಕ್ಕೆ ವೇಷಭೂಷಣ, ಹಿಮ್ಮೇಳ ಕಲಾವಿದರು ಎಂದೆಲ್ಲಾ ಆಗುವಾಗ ಬಹಳಷ್ಟು ಹೊರೆಯಾಗುತ್ತದೆ. ಅದನ್ನು ಕಡಿತಗೊಳಿಸುವರೇ ಅಕಾಡೆಮಿಗಳು ವೇಷಭೂಷಣ ಮತ್ತು ಹಿಮ್ಮೇಳ ಪರಿಕರಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆ ಮಾಡಬೇಕು ಮತ್ತು ಇದಕ್ಕಾಗಿ ನಾನು ಸಾಂಸ್ಕೃತಿಕ ಸಚಿವರನ್ನು ಒತ್ತಾಯಿಸಿ, ಅದಕ್ಕೆ ಬೇಕಾಗುವ ವ್ಯವಸ್ಥೆ ಖಂಡಿತಾ ಮಾಡುತ್ತೇನೆ. ಇಂದು ಯಕ್ಷಗಾನ ಕಲಾವಿದೆ ಸುಲೋಚನಾ ವಿ. ರಾವ್ ರವರು ದುರ್ಗಾಂಬಾ ಮಹಿಳಾ ಮಂಡಳಿಯ ಸ್ಥಾಪಕಾಧ್ಯಕ್ಷೆಯಾಗಿ , ಕಲಾವಿದೆಯಾಗಿ ಈ ರಂಗದಲ್ಲಿ ಸಾಕಷ್ಟು ದುಡಿದಿದ್ದಾರೆ. ದಶಮಾನೋತ್ಸವದ ಸಂಭ್ರಮದಲ್ಲಿರುವ ಮಹಿಳಾ ವೃಂದ ಇವರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ ಎಂದು ಕರ್ನಾಟಕ ಘನ ಸರ್ಕಾರದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದ ಸಿರಿ ಚಾವಡಿಯಲ್ಲಿ ದಶಮಾನೋತ್ಸವಾಚರಣೆಯ ಸಂದರ್ಭದಲ್ಲಿ ಕಲಾವಿದರನ್ನು ಸನ್ಮಾನಿಸಿ, ಅಧ್ಯಕ್ಷತೆಯನ್ನು ವಹಿಸಿದ್ದ ಕತ್ತಲ್ಸಾರ್ ಹೇಳಿದರು.
ಉದ್ಯಮಿ ಮಧುಸೂದನ ಅಯಾರ್, ಆಕಾಶವಾಣಿ ಹಿಂದಿ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತಿ ಹೊಂದಿರುವ ಮಾಲತಿ ಭಟ್, ಶಿಕ್ಷಕ-ಗುರು ವಾಸುದೇವ ರಾವ್, ಸರಯೂ ಮಹಿಳಾ ವೃಂದದ ಅಧ್ಯಕ್ಷೆ ವಿಜಯಲಕ್ಷ್ಮೀ ಎಲ್ ನಿಡ್ವಣ್ಣಾಯ, ಮಧು¸ಸೂದನ ಅಲೆವೂರಾಯ ವರ್ಕಾಡಿ, ಡಾ.ದಿನೇಶ್ ನಾಯಕ್, ಶಾಂತಾ ಆರ್ ಎರ್ಮಾಳ್ ಉಪಸ್ಥಿತರಿದ್ದರು.