ಉಡುಪಿ, ಸೆ 09 (DaijiworldNews/PY): ಚೋಟಾ-ಮೋಟಾಗಳ ಯಾವುದೇ ಬೆದರಿಕೆಗೂ ಸರ್ಕಾರ ಜಗ್ಗುವುದಿಲ್ಲ. ಡ್ರಗ್ಸ್ ದಂಧೆಯ ಮೂಲವನ್ನು ಮೊದಲು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶೇಡಿಮನೆ ಅರಸಮ್ಮನಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮೀಪ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ವಿಶ್ವ ವಿದ್ಯಾನಿಲಯಗಳು ಹಾಗೂ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳ ಹತ್ತಿರದಲ್ಲಿ ಮಾದಕ ದ್ರವ್ಯಗಳು ಸುಲಭವಾಗಿ ಸಿಗುತ್ತವೆ ಎನ್ನುವ ಮಾಹಿತಿ ಇದೆ. ಅಲ್ಲದೆ, ಡ್ರಗ್ ಮಾಫಿಯಾ ಸಂಬಂಧ ಇಂದು ಕೆಲವು ಸೆಲೆಬ್ರಿಟಿಗಳು ರಾಜ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಡ್ರಗ್ಸ್ ದಂಧೆಯ ಮೂಲವನ್ನು ಮೊದಲು ಪತ್ತೆ ಹಚ್ಚಬೇಕು ಎಂದು ತಿಳಿಸಿದರು.
ದೇಶ ವಿದೇಶದಿಂದ ಡ್ರಗ್ಸ್ ಅನ್ನು ಸರಬರಾಜು ಮಾಡುವವರು ಯಾರು. ನಮ್ಮ ರಾಜ್ಯಕ್ಕೆ ಇದರ ಸರಬರಾಜು ಯಾರಿಂದ ಆಗುತ್ತದೆ ಎನ್ನುವ ವಿಚಾರವನ್ನು ಮೂಲದಿಂದ ಪತ್ತೆ ಹಚ್ಚಿದರೆ ಮಾತ್ರ ಸತ್ಯ ವಿಚಾರ ಬಹಿರಂಗವಾಗುತ್ತದೆ.
ಗಾಂಜಾ, ಮಾಧಕ ದ್ರವ್ಯಗಳು ಜೀವನದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಹಲವಾರು ಸಂದರ್ಭದಲ್ಲಿ ಡ್ರಗ್ಸ್ ಮಾಫಿಯಾದ ಜೊತೆಗೆ ಡ್ರಗ್ ಜಿಹಾದಿ ಕೂಡಾ ನಡೆಯುತ್ತಿದೆ. ಈ ಕಾರಣದಿಂದ ಡ್ರಗ್ಸ್ ಮಾಫಿಯಾವನ್ನು ಪತ್ತೆ ಮಾಡುವಂತ ಪ್ರಯತ್ನವನ್ನು ಎಲ್ಲಾ ಸರ್ಕಾರಗಳು ಒಟ್ಟು ಸೇರಿ ಮಾಡಬೇಕು ಎಂದರು.
ನಮ್ಮ ಪೊಲೀಸರು ಸಶಕ್ತರಾಗಿದ್ದಾರೆ. ಡ್ರಗ್ಸ್ ದಂಧೆಯ ಜಾಲವನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ನಮ್ಮ ರಾಜ್ಯಕ್ಕೆ ಎಲ್ಲಿಂದ ಹಾಗೂ ಯಾರು ಡ್ರಗ್ಸ್ ಸರಬರಾಜು ಮಾಡುತ್ತಾರೆ, ಇದರ ಮೂಲಪುರುಷ ಯಾರು ಎನ್ನುವ ವಿಚಾರವನ್ನು ಕೂಡಾ ಪತ್ತೆ ಮಾಡುತ್ತಾರೆ. ಅಲ್ಲದೇ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಯಾರ ಬೆದರಿಕೆಗೂ ಸರ್ಕಾರ ಜಗ್ಗುವಂತ ಪ್ರಶ್ನೆ ಇಲ್ಲ. ಈ ಚೋಟಾ-ಮೋಟಾಗಳು ಯಾವುದೇ ಧಮ್ಕಿ ಹಾಕಿದರೂ ಕೂಡಾ ಅವರ ಭಯಕ್ಕೆ ಅವರು ಧಮ್ಕಿ ಹಾಕುತ್ತಿರಬಹುದು ಅಷ್ಟೆ ಎಂದು ಹೇಳಿದರು.
ರಸ್ತೆಯ ಕಾಮಗಾರಿ ಕೊರೊನಾ ಕಾರಣದಿಂದ ಕುಂಠಿತವಾಗಿದೆ. ನಾಳೆಯಿಂದಲೇ ಕೆಲಸ ಪ್ರಾರಂಭವಾಗುತ್ತದ. ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ಶೀಘ್ರವೇ ಈ ಕಾರ್ಯವನ್ನು ಸಂಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಾ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.