ಬೈಂದೂರು, ಸೆ 07 (DaijiworldNews/PY): ಉದ್ಯಮಿಗಳು ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಸತ್ಕಾರ್ಯಕ್ಕೆ ಬಳಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಬಹರೈನ್ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಹೇಳಿದರು.
ಸೋಮವಾರದಂದು ಬಡಾಕೆರೆ ಸರಕಾರಿ ಶಾಲೆಯ ಆವರಣದಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ಇವರ ವತಿಯಿಂದ ಹಮ್ಮಿಕೊಳ್ಳಲಾದ ಅಶಕ್ತರಿಗೆ ಕಿಟ್ ವಿತರಣೆ ಹಾಗೂ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಮ್ಮದೀಯ ಜುಮ್ಮ ಮಸೀದಿ ಆಕಳಬೈಲು ಕಿರಿಮಂಜೇಶ್ವರ ಇಸ್ಮಾಯಿಲ್ ಹಜಾರ್ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಎಲ್ಲರೂ ಪರೋಪಕಾರದ ಮೂಲಕ ಸರ್ವಧರ್ಮ ಸಮನ್ವಯತೆಯಿಂದ ಬಾಳುವ ಸಮಾಜ ನಿರ್ಮಾಣವಾಗಬೇಕು ಎಂದರು.
ಬಿ.ಅಬ್ದುಲ್ ಹಮೀದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ಉಪಾಧ್ಯಕ್ಷ ಉಮರ್ ಸಾಹೇಬ್, ಮಾಜಿ ಗ್ರಾ.ಪಂ.ಸದಸ್ಯ ದಿನೇಶ್ ಶೆಟ್ಟಿ, ಶ್ರೀಧರ ದೇವಾಡಿಗ, ಕಾರ್ಯಕ್ರಮದ ಸಂಯೋಜಕ ಮುಭಾರಕ್ ಬಾರಕೂರು, ಹಸನ್ ಮೆವಾಡ ಬೈಂದೂರು, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.