ಉಡುಪಿ: ರ್ಯಾಪಿಡ್ ಆಂಟಿಜೆನ್ ಪರೀಕ್ಷೆ - ಜನರ ತಪ್ಪು ಕಲ್ಪನೆ ನಿವಾರಿಸಿದ ವೈದ್ಯರು
Sat, Sep 05 2020 01:12:27 PM
ಉಡುಪಿ, ಸೆ.05(DaijiworldNews/HR):ಕೆಮ್ಮು ಶೀತ ಜ್ವರ ಒಂದು ವಾರದಿಂದ ಇದ್ದ ವ್ಯಕ್ತಿಗಳಿಗೆ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಿದಾಗ ಪಾಸಿಟಿವ್ ಎಂದು ವರದಿ ಬರುತ್ತದೆ ಈ ವೇಳೆ ರೋಗಿಗಳು ವೈದ್ಯರ ಬಳಿ ವರದಿ ಸರಿ ಇಲ್ಲ, ನೀವು ದಂಧೆ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಈ ಸಂಧರ್ಭದಲ್ಲಿ ವೈದ್ಯರು ಕೂಡಾ ತೀವ್ರತರವಾದ ಒತ್ತಡಕ್ಕೆ ಸಿಲುಕುತ್ತಾರೆ ಎಂದು ಆದರ್ಶ ಆಸ್ಪತ್ರೆ ಉಡುಪಿ ಇದರ ಆಡಳಿತ ನಿರ್ದೇಶಕರು ಮತ್ತು ಹಿರಿಯ ವೈದ್ಯ ರಾದ ಡಾಕ್ಟರ್ ಜಿ. ಎಸ್. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಆದರ್ಶ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗೆ ಕೊವಿಡ್ ಕುರಿತಾಗಿ ಜಾಗೃತಿ ಮೂಡಿಸಲು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು "ಖಂಡಿತವಾಗಿಯೂ ವೈದ್ಯರು ಪರೀಕ್ಷೆ ನಡೆಸಿ ಕೊವಿಡ್ ಪಾಸಿಟಿವ್ ಎಂದು ವರದಿ ನೀಡಿದಾಗ ವೈದ್ಯರನ್ನು ನಂಬಿ ಉತ್ತಮ ಚಿಕಿತ್ಸೆ ಪಡೆಯಬೇಕು. ಆದಷ್ಟೂ ಬೇಗ ಪರೀಕ್ಷೆ ಮಾಡುವುದರಿಂದ ದುರ್ಮರಣಗಳನ್ನು ತಪ್ಪಿಸಬಹುದು.ಲಕ್ಷಣಗಳು ಇದ್ದು ಎಕ್ಸ್ ರೇ ಪರೀಕ್ಷೆ ಮಾಡಲು ಹೇಳಿದಾಗ ಕೆಲವರು ರೋಗಿ ಮರಣವನ್ನಪಿದರೂ ಪರವಾಗಿಲ್ಲ ನಾವು ಕೊವಿಡ್ ಪರೀಕ್ಷೆ ಮಾಡುವುದಿಲ್ಲ ಎಂದು ಅತೀರೇಕವಾದ ಮಾತುಗಳನ್ನು ಆಡುತ್ತಾರೆ. ರೋಗಿಯನ್ನು ಕೊವಿಡ್ ಪರೀಕ್ಷೆಯಿಂದ ತಪ್ಪಿಸಿ ಮರಣವನ್ನಪ್ಪಿದರೆ ನಿಮಗೆ ಬೇಕಾದ ರೀತಿಯಲ್ಲಿ ಶವ ಸಂಸ್ಕಾರ ಮಾಡಬಹುದು ಆದರೆ ರೋಗಿಯ ಮನೆಯವರಿಗೆ ಎಲ್ಲರಿಗೂ ಆ ರೋಗಿಯ ಕಾರಣದಿಂದ ರೋಗವನ್ನು ಹಂಚುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿ ಇರುವ ಮಕ್ಕಳಿಗೂ ಅಪಾಯ ಇದೆ. ಸೂಕ್ತ ಪರೀಕ್ಷೆ ಮಾಡುವುದರಿಂದ ರೋಗ ಹರಡುವ ಅಪಾಯವನ್ನು ತಪ್ಪಿಸಬಹುದಾಗಿದೆ" ಎಂದರು.
"ಸಾರ್ವಜನಿಕರು ನೀವು ದಂಧೆ ಮಾಡುತ್ತಿದ್ದಿರಿ, ಸರಕಾರ ಆಸ್ಪತ್ರೆ ಸೇರಿ ಹಣ ಮಾಡುತ್ತಿದ್ದೀರಿ ಎಂದು ಹೇಳುವಾಗ ನಮಗೆ ಕಣ್ಣೀರು ಬರುತ್ತದೆ. ರೋಗ ಲಕ್ಷಣ ಇದ್ದಲ್ಲಿ ಪ್ರಥಮವಾಗಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದರೆ ಮತ್ತೆ ಪುನಹಃ ಆರ್ ಟಿ ಪಿ ಸಿ ಆರ್ (RT - PCR) ಪರೀಕ್ಷೆ ನಡೆಸುತ್ತೇವೆ ಆಗ ಪಾಸಿಟಿವ್ ವರದಿ ಬರುತ್ತದೆ ಇದನ್ನು ರೋಗಿ ನಂಬುವುದಿಲ್ಲ. ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಲ್ಲಿ ಅದು ಖಚಿತವಾಗಿ ಪಾಸಿಟಿವ್ ವರದಿ ಆದರೆ ಅದರಲ್ಲಿ ನೆಗೆಟಿವ್ ಬಂದಲ್ಲಿ ಮತ್ತೆ ಪುನಹಃ ರೋಗಿಗೆ ಸೊಂಕಿನ ಲಕ್ಷಣಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ವೈದ್ಯರು ಇಂತಹ ಸಂಧರ್ಭದಲ್ಲಿ ನಿರ್ಧಾರ ತೆಗೆದುಕೊಂಡು ಆರ್ ಟಿ ಪಿ ಸಿ ಆರ್ ಟೆಸ್ಟ್ ಗೆ ಸೂಚಿಸುತ್ತಾರೆ. ಆರ್ ಟಿ ಪಿ ಸಿ ಆರ್ ನಲ್ಲಿ ಕೂಡಾ ನೆಗೆಟಿವ್ ಎಂದು ಬಂದಲ್ಲಿ ಅದನ್ನು ಖಚಿತವಾಗಿ ನೆಗೆಟಿವ್ ಎಂದು ಭಾವಿಸಿಕೊಳ್ಳಬಹುದು. ಹೀಗಾಗಿ ಸಾರ್ವಜನಿಕರು ವಿನಾ ಕಾರಣ ಆಸ್ಪತ್ರೆಯ ಮೇಲೆ, ವೈದ್ಯರ ಮೇಲೆ ಕೋಪ ಮಾಡಿಕೊಳ್ಳಬಾರದು ಎಂದರು.
ಪ್ರತಿಯೊಂದು ಟೆಸ್ಟ್ ಗೆ ಕೂಡಾ ಅದರದೇ ಆದ ಒಂದು ಇತಿ ಮಿತಿಗಳು ಇರುತ್ತವೆ. ಹೀಗಾಗಿ ಇಂತಹ ಸಂಧರ್ಭದಲ್ಲಿ ವೈದ್ಯರು ತಮ್ಮ ಸೇವಾ ಅನುಭವದ ಮೇಲೆ ಹೆಚ್ಚಿನ ಪರೀಕ್ಷೆಗೆ ರೋಗಿಯನ್ನು ಒಳಪಡಿಸಲು ಕೇಳಿಕೊಳ್ಳುತ್ತಾರೆ. ಸದ್ಯ ರಾಜ್ಯ, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಮತ್ತು ಮರಣ ಪ್ರಮಾಣ ಹೆಚ್ಚಾಗುತ್ತಿದೆ ಇದನ್ನು ತಡೆಗಟ್ಟಲು ಸಾರ್ವಜನಿಕರು ಆರೋಗ್ಯ ಇಲಾಖೆ, ಸರಕಾರ ಮತ್ತು ವೈದ್ಯರ ಮೇಲೆ ನಂಬಿಕೆ ಇಟ್ಟಲ್ಲಿ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಬಹುದು. 100 ರಲ್ಲಿ 90 ಜನ ವೈದ್ಯರು, ಸರಕಾರದ ಮಾತನ್ನು ನಂಬುತ್ತಾರೆ ಆದರೆ 10 ಜನ ರೋಗದ ಕುರಿತು ಅಪಪ್ರಚಾರ ಮಾಡುತ್ತಿರುವುದು ಬೇಸರದ ಸಂಗತಿ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಅಭಿಪ್ರಾಯಗಳು ಹೆಚ್ಚು ಪ್ರಸಾರ ಆಗುತ್ತಿದೆ ಸಾರ್ವಜನಿಕರು ಇಂತಹದನ್ನು ಹೆಚ್ಚು ಪ್ರಸಾರ ಮಾಡದೇ ನಿಜ ಮತ್ತು ಸತ್ಯ ಮಾಹಿತಿಯನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದವರು ಕೇಳಿಕೊಂಡರು.