ಬಂಟ್ವಾಳ, ಸೆ. 01 (DaijiworldNews/MB) : ಸೋಮವಾರ ಸಂಜೆ ನಡೆದ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರವಾಹನ ಸವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಮೃತರನ್ನು ಬಂಟ್ವಾಳ ಪಲ್ಲಮಜಲು ನಿವಾಸಿ ಪ್ರಕಾಶ್ ಆರ್ ಚೌಟ ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ವೇಳೆ ಬಿಸಿರೋಡು ಸರ್ಕಲ್ ಬಳಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಗುದ್ದಿ ಪರಾರಿಯಾಗಿದ್ದು ಗಂಭೀರವಾಗಿ ತಲೆಗೆ ಗಾಯಗೊಂಡಿದ್ದ ದ್ವಿ ಚಕ್ರ ವಾಹನ ಸವಾರ ಪ್ರಕಾಶ್ ಅವರನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಇನ್ನು ದ್ವಿ ಚಕ್ರ ವಾಹನಕ್ಕೆ ಗುದ್ದಿ ಪರಾರಿಯಾಗಿದ್ದ ಕಾರು ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಕೆ.ವಿ.ನೇತ್ರತ್ವದ ತಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ. ಚಾಲಕನ ವಿರುದ್ದ ದೂರು ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ ಪರಾರಿಯಾದ ಕಾರಿನ ಬಗ್ಗೆ ಸಿ.ಸಿ.ಕ್ಯಾಮಾರದಲ್ಲಿ ಮಾಹಿತಿ ಪಡೆದು ಮಂಗಳೂರಿನಲ್ಲಿ ಪತ್ತೆ ಮಾಡಿದ್ದಾರೆ.