ಉಡುಪಿ, ಆ. 31 (DaijiworldNews/MB) : ಬೀಜಿ ಎಂದೇ ಖ್ಯಾತರಾಗಿರುವ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಜೂರು ಗೋವಿಂದಪ್ಪ ಮೋಹನ್ ದಾಸ್ ಅವರು ಸೋಮವಾರ ಮಧ್ಯಾಹ್ನ ಹೃದಯಘಾತ ಸಂಭವಿಸಿ ವಿಧಿವಶರಾಗಿದ್ದಾರೆ.
70 ವರ್ಷದ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
80 ರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ಹೋದ ಅವರು ಅಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ್ದು ಕನ್ನಡ ಭಾಷೆ ಪ್ರೇಮದಿಂದ ಕನ್ನಡಿಗರ ಸಂಘಟನೆ ಸ್ಥಾಪಿಸಿ ಬೆಳೆಸಿದ್ದಾರೆ. ಅವರು ಕನ್ನಡಕ್ಕೆ ನೀಡಿದ ಅಪಾರ ಸಾಧನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ ಶಾರ್ಜಾ ಕರ್ನಾಟಕ ಸಂಘ 2007 ರಲ್ಲಿ ಮಯೂರ ಪ್ರಶಸ್ತಿ, 2002ರಲ್ಲಿ ಮಣಿಪಾಲ ವಿ.ವಿ. ಯಿಂದ ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ವೆಬ್ಸೈಟ್ ಪತ್ರಿಕೋದ್ಯಮ ಆರಂಭಿಸಿದ ಅವರ ಸಾಧನೆಗೆ ಅಬುಧಾಬಿ ಕರ್ನಾಟಕ ಸಂಘ ಪ್ರಥಮ ದ.ರಾ.ಬೇಂದ್ರೆ ಪ್ರಶಸ್ತಿ ನೀಡಿತ್ತು.
1985 ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿದ ಅವರು 1988ರಲ್ಲಿ ಸಂಘಕ್ಕಾಗಿ ಸಂವಿಧಾನ ರೂಪಿಸಿದ್ದಾರೆ. 1989ರಲ್ಲಿ ಸಂಘದ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾದರು.
ಇನ್ನು ಅವರು ಸುಮಾರು 35 ವರ್ಷಗಳಿಂದ ಔಷಧಿ ಶಾಸ್ತ್ರದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದು ಮಣಿಪಾಲ ಫಾರ್ಮಸಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಯು.ಎ.ಇ ಇಂಡಿಯನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬೀಜಿ ಅವರು, ಪತ್ನಿ ಯಶೋದಾ, ಪುತ್ರ ಅಖಿಲ್ , ಪುತ್ರಿ ಯಶಸ್ವಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.