Karavali
ಬೈಂದೂರು: '10 ಕೋಟಿ ವೆಚ್ಚದ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ' - ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ
- Tue, Aug 18 2020 06:19:29 PM
-
ಬೈಂದೂರು, ಆ 18 (DaijiworldNews/PY): ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬರುತ್ತಿದ್ದು, ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇನ್ನಷ್ಟು ಕಾಮಗಾರಿಗಳು ಶೀಘ್ರ ಶಿಲಾನ್ಯಾಸಗೊಳ್ಳಲಿದೆ. ಬೈಂದೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು ಬೈಂದೂರು, ಯಡ್ತರೆ, ಪಡುವರಿ ಗ್ರಾ.ಪಂ.ಗಳನ್ನೊಳಗೊಂಡು ಪಟ್ಟಣ ಪಂಚಾಯತ್ ರಚನೆಯಾಗಿದೆ. ಬೈಂದೂರಿನಲ್ಲಿ 2.22 ಎಕ್ರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣವಾಗಲಿದ್ದು, ಈಗಾಗಲೇ ಮಂಜೂರಾತಿ ಆಗಿದೆ. ಒಂದು ತಿಂಗಳಲ್ಲಿ ಸಂಸದರು, ಕಂದಾಯ ಸಚಿವರ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಆ.18ರಂದು ಬೈಂದೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್ ಯೋಜನೆಯಡಿ ಪ್ರತೀ ಮನೆಗೆ ಕುಡಿಯುವ ನೀರು ಸೌಕರ್ಯ ಕಲ್ಪಿಸಲು 220 ಕೋಟಿ ಅನುದಾನ ಬಿಡುಗಡೆಯಾಗಿದೆ. ಎರಡು ವರ್ಷದಲ್ಲಿ ಬೈಂದೂರು ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಸೌಕೂರು ಏತ ನೀರಾವರಿಯ 73 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದ್ದು, 8 ಗ್ರಾಮದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಬೈಂದೂರು ಕ್ಷೇತ್ರದಲ್ಲಿ ಸುಮನಾವತಿ ನದಿಗೆ ಸುಬ್ಬರಡಿಯಲ್ಲಿ 35 ಕೋಟಿ ಅನುದಾನ ಮಂಜೂರಾಗಿದ್ದು, ಮಳೆಗಾಲ ಮುಗಿದ ನಂತರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗುವುದು ಎಂದರು.
ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ಸುಮಾರು 75 ಕೋಟಿ ಹಾಗೂ ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿ 10 ಕೋಟಿ ಸೇರಿದಂತೆ ಒಟ್ಟು 102 ಕೋಟಿ ಮೊತ್ತದ ವಿವಿಧ ಬಹುಪಯೋಗಿ ಅಗತ್ಯ ಕಿಂಡಿ ಅಣೆಕಟ್ಟುಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಮತ್ಸ್ಯೋದ್ಯಮ ಬೆಂಬಲಕ್ಕೆ ಮರವಂತೆ ಬ್ರೇಕ್ ವಾಟರ್ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ. ಅನುದಾನ, ಗಂಗೊಳ್ಳಿ ಮೀನುಗಾರಿಕಾ ಬಂದರಿನಲಿ ಜೆಟ್ಟಿ ಹಾಗೂ ಡಯಾಫ್ರಾಮ್ ಗೋಡೆ ಕಾಮಗಾರಿಗೆ ರೂಪಾಯಿ 4 ಕೋಟಿ, ಕೊಡೇರಿ ಬಂದರು ಅಭಿವೃದ್ಧಿಗೆ ರೂ. 2.00 ಕೋಟಿ ಮತ್ತು ಕೊಡೇರಿ ನದಿದಂಡೆ ಸಂರಕ್ಷಣೆ ಮತ್ತು ನ್ಯಾವಿಗೇಶನ್ ಚಾನಲ್ ಕಾಮಗಾರಿಗೆ ರೂ. 2.80 ಸೇರಿದಂತೆ ಒಟ್ಟು 93.80 ಕೋಟಿ ರೂ. ಗಳ ಅನುದಾನ ಬಿಡುಗಡೆಯಾಗಿದೆ ಎಂದರು.
ರಾಜ್ಯ ಹೆದ್ದಾರಿ ನಡುವೆ ಬರುವ ಸಿದ್ದಾಪುರ ಸರ್ಕಲ್ ಅಭಿವೃದ್ಧಿಗೆ ರೂ. 3.00 ಕೋಟಿ ಅನುದಾನ, ಸೌಕೂರು ದೇವಸ್ಥಾನದ ಸುತ್ತಮುತ್ತಲ ಅಭಿವೃದ್ಧಿಗೆ ರೂ. 2.00 ಕೋಟಿ, ಕೊಲ್ಲೂರು ದೇವಸ್ಥಾನದ ಸುತ್ತಮುತ್ತಲ ಅಭಿವೃದ್ಧಿಗೆ ರೂ. 3.00 ಕೋಟಿಗಳ ಅನುದಾನ ಬಿಡುಗಡೆಯಾಗಿದೆ. ಪ್ರವಾಸೋದ್ಯಮ ಇಲಾಖೆಯಡಿ ಮರವಂತೆ ಬೀಚ್ ಅಭಿವೃದ್ಧಿಗೆ ಬಿಡುಗಡೆಯಾದ 5.00 ಕೋಟಿ ಮೊತ್ತದ ಕಾಮಗಾರಿಯ ಅಂದಾಜು ಪಟ್ಟಿ ಸಲ್ಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮತ್ತು ಸೋಮೇಶ್ವರ ಬೀಚ್ ಅಭಿವೃದ್ಧಿಗೆ ರೂ. 5.00 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.
ಅಗ್ನಿಶಾಮಕ ಠಾಣೆ ಈಗಾಗಲೇ ಮಂಜೂರಾಗಿದ್ದು, ರೂ. 10.00 ಕೋಟಿ ಅನುದಾನ ಮಂಜೂರಾಗಿದೆ. ವಾರಾಹಿ ಇಲಾಖೆಯಡಿಯಲ್ಲಿ ಒಟ್ಟು ರೂ. 42.48 ಕೋಟಿ ಮೊತ್ತದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಒಟ್ಟು 65.15 ಕೋಟಿ ಅನುದಾನ ಬಿಡುಗಡೆಯಾಗಿದ್ದು, 42.00 ಕೋಟಿ ಮೊತ್ತದ ವಿವಿಧ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ. ಜೊತೆಗೆ ಪಿ.ಎಮ್.ಜಿ.ಎಸ್.ವೈ-3 ಬ್ಯಾಚ್ -1 ಮತ್ತು 2ರಲ್ಲಿ ಒಟ್ಟು 5 ರಸ್ತೆಗಳಿಗೆ 23.15 ಕೋಟಿ ಮೊತ್ತವನ್ನು ನಿಗದಿಪಡಿಸಿದ್ದು ಅದರಲ್ಲಿ ಮೂಡುಬಗೆ-ಮಾರ್ಡಿ ರಸ್ತೆಗೆ 6.54 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಒಟ್ಟು 14.20 ಕೋಟಿ ಮೊತ್ತದ ವಿವಿಧ ಮೀನುಗಾರಿಕಾ ಕೊಂಡಿ ರಸ್ತೆಗಳ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದು, ಒಂದೆರಡು ತಿಂಗಳಲ್ಲಿ ಅನುದಾನ ಬಿಡುಗಡೆಯಾಗಲಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎಸ್.ಎಚ್.ಡಿ.ಪಿ)ಯ 20 ಕೋಟಿ ರೂ. ಮೊತ್ತದ ಹೆಮ್ಮಾಡಿ-ನೆಂಪುವರೆಗಿನ ರಸ್ತೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ಹೆರಂಜಾಲು ಸಿಬ್ಬಂದಿ ವರ್ಗದ ವಸತಿ ಗೃಹಗಳ ನಿರ್ಮಾಣದ 5 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ ಬೈಂದೂರಿನಲ್ಲಿ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ 4.00 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.
ಕರ್ನಾಟಕ ಗೃಹ ಮಂಡಳಿ ಇಲಾಖೆಯಡಿಯಲ್ಲಿ 3.26 ಕೋಟಿ ರೂಪಾಯಿಯ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ನಬಾರ್ಡ್ನಿಂದ ಆಡಳಿತಾತ್ಮಕ ಅನುಮೋದನೆಗಾಗಿ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ. 1.20 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ. 10 ಕೋಟಿ ರೂ. ಮೊತ್ತದ 33/11 ಕೆ.ವಿ. ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿಗಾಗಿ ಪ್ರಸ್ತಾವನೆಯನ್ನು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕು ಅಂಬೇಡ್ಕರ್ ಭವನ ಮತ್ತು ಒಂದು ಜಗನ್ಜೀವನ್ ರಾಮ್ ಭವನ ನಿರ್ಮಾಣಕ್ಕೆ ಒಟ್ಟು 1 ಕೋಟಿ ಅನುದಾನ ಮಂಜೂರು ಆಗಿದ್ದು, ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.
ನ್ಯಾಯಾಲಯ ನಿರ್ಮಾಣ, ತಾಲೂಕು ಪಂಚಾಯತ್ ಕಛೇರಿ ನಿರ್ಮಾಣ, ಭೂ ನ್ಯಾಯ ಮಂಡಳಿ ರಚನೆ, ಆಹಾರ ಶಾಖೆ ನಿರ್ಮಾಣ. ಬೈಂದೂರು ಹೊಸ ಬಸ್ ನಿಲ್ದಾಣದ ಅಭಿವೃದ್ಧಿ, ತಾಂತ್ರಿಕ ಕಲಿಕೆಗೆ ಸರ್ಕಾರಿ ಐಟಿಐ ಕಾಲೇಜು ಮೇಲ್ದರ್ಜೆಗೆರಿಸುವುದು, ಕ್ರೀಡಾ ಪ್ರೋತ್ಸಾಹಕ್ಕೆ ವಿಶಾಲ ಒಳ ಹೊರ ಕ್ರೀಡಾಂಗಣ ನಿರ್ಮಾಣ, ಬೈಂದೂರಿನಲ್ಲಿ 100 ಬೆಡ್ ಸರ್ಕಾರಿ ಆಸ್ಪತ್ರೆ, ಡಯಾಲಿಸಿಸ್ ಯಂತ್ರ, ಕೊಲ್ಲೂರಿನಲ್ಲಿ ನೂತನ ಗೋಶಾಲೆ, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಂಸದರೊಂದಿಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೊಲ್ಲೂರು-ಕೊಡಚಾದ್ರಿ ಕೇಬಲ್ಕಾರ್ ಯೋಜನೆ ಬಗ್ಗೆ ಈಗಾಗಲೇ ಸಂಸದರೊಂದಿಗೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಉದ್ದೇಶಿತ ಕಾಮಗಾರಿಯನ್ನು ಮಂಜೂರಾತಿಯಾಗಲಿದೆ ಎಂದು ಹೇಳಿದರು.
ಮೀನುಗಾರಿಕಾ ಇಲಾಖೆಯಡಿಯಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ 100 ವಸತಿ ರಹಿತ ಫಲಾನುಭವಿಗಳಿಗೆ ಮನೆಯನ್ನು ಹಂಚಿಕೆ ಮಾಡಲಾಗಿದೆ. ಬೈಂದೂರು ಕ್ಷೇತ್ರದ ಕೆಲವೊಂದು ಪ್ರದೇಶಗಳು ಮಳೆಗಾಲದಲ್ಲಿ ಜಲಾವೃತವಾಗಿದ್ದು, ಜನ ಜಾನುವಾರುಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲು ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರರವರ ಸಹಯೋಗದೊಂದಿಗೆ ಮತ್ತು ವೈಯಕ್ತಿಕ ನೆಲೆಯಲ್ಲಿ ಅರ್ಹ ಬಡ ಕುಟುಂಬಗಳಗೆ ಕಿಟ್ಗಳನ್ನು ಮತ್ತು ಮಾಸ್ಕ್ ಅನ್ನು ವಿತರಿಸಲಾಗಿದೆ. ಕುಂದಾಪುರ ಎಜ್ಯುಕೇಶನ್ ಟ್ರಸ್ಟ್ನ ಅಡಿಯಲ್ಲಿ ಬರುವ ಎಚ್.ಎಮ್.ಎಮ್.ವಿ.ಕೆ.ಆರ್.ಆರ್.ಎನ್.ಶೆಟ್ಟಿ ಮತ್ತು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ರೂ. 70.00 ಲಕ್ಷ ಮೊತ್ತದ ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಕೊಡೇರಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಡಿದ ಮೀನುಗಾರರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಲ್ಲಿ 6 ಲಕ್ಷ, 2 ಲಕ್ಷ ಕೇಂದ್ರದಿಂದ ಸಿಗುತ್ತದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸುರೇಶ ಬಟ್ವಾಡಿ, ಶೋಭಾ ಪುತ್ರನ್, ಬೈಂದೂರು ತಾ.ಪಂ.ಉಪಾಧ್ಯಕ್ಷೆ ಮಾಲಿನಿ ಕೆ. ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ, ಬಾಲಚಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.