ಮಂಗಳೂರು, ಆ. 17 (DaijiworldNews/MB) : ಕೊರೊನಾ ಕಾರಣದಿಂದಾಗಿ ಶಾಲೆ ಮತ್ತು ಕಾಲೇಜುಗಳು ಹಲವು ತಿಂಗಳುಗಳಿಂದ ಬಂದ್ ಆಗಿದೆ. ವಿದ್ಯಾರ್ಥಿಗಳಿಗಾಗಿ ಆನ್ಲೈನ್ ತರಗತಿಗಳು ಈಗಾಗಲೇ ಪ್ರಾರಂಭವಾಗಿವೆ. ಆದರೆ ಹಲವು ಪೋಷಕರು ತಮ್ಮ ಮಕ್ಕಳಿಗೆ ಆನ್ಲೈನ್ ತರಗತಿಯಲ್ಲಿ ಭಾಗಿಯಾಗಲು ಬೇಕಾದ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ಗಳನ್ನು ಖರೀದಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ.
ಮಕ್ಕಳ ಆನ್ಲೈನ್ ತರಗತಿಗೆ ಲಾಪ್ಟಾಪ್ ಹಾಗೂ ಸ್ಮಾರ್ಟ್ ಫೋನ್ ಖರೀದಿ ಮಾಡಲೆಂದು ಪೋಷಕರು ತಮ್ಮ ವಾಹನ, ಆಭರಣಗಳನ್ನು ಅಡವಿಟ್ಟಿರುವ ನಿದರ್ಶನಗಳು ಈಗಾಗಲೇ ನಮ್ಮ ಕಣ್ಣಮುಂದಿದೆ. ಕೊರೊನಾ ಕಾರಣದಿಂದಾಗಿ ತಮ್ಮ ಉದ್ಯೋಗ ಕಳೆದುಕೊಂಡ ಪೋಷಕರಿಗಂತು ಆನ್ಲೈನ್ ತರಗತಿ ಆರಂಭದ ಬಳಿಕ ಮತ್ತಷ್ಟು ಸಂಕಷ್ಟ ಉಂಟಾಗಿದೆ.
ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿರುವ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿಯುತ್ತಿರುವ ಇಬ್ಬರು ಯುವ ವಿದ್ಯಾರ್ಥಿಗಳಾದ ಅಮನ್ ರೊಡ್ರಿಗಸ್ ಮತ್ತು ಸುಚೇತಾ ವಿಕ್ರಮ್ ಅವರು ಬಳಸಿದ ಮೊಬೈಲ್ಗಳನ್ನು ಸಂಗ್ರಹ ಮಾಡಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ದಾನ ಮಾಡಲು ಆರಂಭಿಸಿದ್ದಾರೆ.
ಈ ಡಿಜಿಟಲ್ ಅಭಿಯಾನದಲ್ಲಿ ಮಂಗಳೂರಿನ ಉಸ್ತುವಾರಿಯನ್ನು ಕರಂಗಲ್ಪಾಡಿ ಮೂಲದ ಅಮನ್ ರೊಡ್ರಿಗಸ್ ಅವರು ವಹಿಸಿದ್ದು ಬೆಂಗಳೂರಿನ ಉಸ್ತುವಾರಿಯನ್ನು ಸುಚೇತಾ ವಿಕ್ರಮ್ ವಹಿಸಿದ್ದಾರೆ.
ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿರುವ ಅಮನ್, ''ಸುರಕ್ಷಾ ಧಾಮ ಎನ್ಜಿಒ ಭಾಗವಾಗಿ ಆರಂಭ ಮಾಡಿರುವ ಈ ಅಭಿಯಾನದ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನು ಹಾಗೂ ಸುಚೇತಾ ವಿಕ್ರಮ್ ಈಗಾಗಲೇ ಉಪಯೋಗ ಮಾಡಿರುವ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತು ಲಾಪ್ಟಾಪ್ಗಳನ್ನು ಸಂಗ್ರಹಿಸಿ ದಾನ ಮಾಡಲು ನಿರ್ಧರಿಸಿದ್ದೇವೆ'' ಎಂದು ಹೇಳಿದ್ದಾರೆ.
''ನಾವು ಉದ್ಯೋಗ ಕಳೆದುಕೊಂಡ ಅಥವಾ ಆರ್ಥಿಕವಾಗಿ ಸದೃಢರಲ್ಲದ ಹಲವು ಪೋಷಕರು ತಮ್ಮ ಮಕ್ಕಳಿಗೆ ಆನ್ಲೈನ್ ತರಗತಿಗಳಿಗಾಗಿ ಮೊಬೈಲ್ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನಾವು ಬಳಸಿದ ಸ್ಮಾರ್ಟ್ ಫೋನ್ಗಳು, ಲ್ಯಾಪ್ಟಾಪ್ಗಳನ್ನು ಜನರಿಂದ ಸಂಗ್ರಹ ಮಾಡಿ ಅದನ್ನು ಮಕ್ಕಳಿಗೆ ಆನ್ಲೈನ್ ಕಲಿಕೆಗಾಗಿ ದಾನ ಮಾಡುತ್ತೇವೆ. ಹಾಗೆಯೇ ತಿಂಗಳಿಗೊಮ್ಮೆ ಅವರು ನಿಜವಾಗಿಯೂ ಫೋನ್ ಬಳಸುತ್ತಾರೋ ಇಲ್ಲವೋ ಎಂದು ಪರಿಶೀಲಿಸುತ್ತೇವೆ'' ಎಂದು ಅಮನ್ ತಿಳಿಸಿದ್ದಾರೆ.
''ಒಂದು ವಾರದ ಹಿಂದೆ ನಾವು ಈ ಅಭಿಯಾನವನ್ನು ಆರಂಭ ಮಾಡಿದ್ದು ಮಂಗಳೂರಿನಲ್ಲಿ ನಾಲ್ಕು ಫೋನ್ಗಳನ್ನು ದಾನ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಎರಡು ಮೊಬೈಲ್ಗಳನ್ನು ನಮ್ಮ ಅಪಾರ್ಟ್ಮೆಂಟ್ನಲ್ಲಿರುವ ಮನೆ ಕೆಲಸ ಮಾಡುವ ಕುಟುಂಬದ ಮಕ್ಕಳಿಗೆ ಹಾಗೂ ಇನ್ನೆರಡು ಮೊಬೈಲ್ಗಳನ್ನು ವೈಟ್ ಡವ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೊರಿನ್ ರಸ್ಕಿನ್ಹ ಅವರ ಮುಖೇನ ವೈಟ್ ಡವ್ಸ್ ಸಂಸ್ಥೆಯಲ್ಲಿರುವ ಮಕ್ಕಳಿಗೆ ದಾನ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
''ಯಾರೂ ದಾನ ಮಾಡಲು ಮುಂದೆ ಬರದ ಕಾರಣ ಈ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗುತ್ತಿದೆ. ಹೆಚ್ಚು ಪರಿಣಾಮಕಾರಿಯಾಗಬಲ್ಲ ಮನೆ ಮನೆಗೆ ತೆರಳಿ ಈ ಅಭಿಯಾನ ಮಾಡಲು ಈ ಸಂದಭದಲ್ಲಿ ಸಾಧ್ಯವಿಲ್ಲ. ಮಂಗಳೂರಿನಲ್ಲಿ ಫೋನ್ ದಾನ ಮಾಡಲು ಈವರೆಗೆ 4-5 ಜನರು ಮುಂದಾಗಿದ್ದಾರೆ. ಹಾಗೆಯೇ ನಮ್ಮೊಂದಿಗೆ ಮುಂಬೈನ ಸಂಘಟನೆಯೊಂದು ಕೈಜೋಡಿಸಿದ್ದು ಅಲ್ಲಿನ ಕೆಲವರು ಬಳಸಿದ ಫೋನ್ಗಳನ್ನು ದಾನ ಮಾಡಲು ಆಸಕ್ತಿ ತೋರಿಸಿದ್ದಾರೆ. ಶೀಘ್ರವೇ ಬೆಂಗಳೂರಿಗೆ ಅದನ್ನು ಕಳುಹಿಸಿಕೊಡಲಿದ್ದಾರೆ'' ಎಂದು ಹೇಳಿದ್ದಾರೆ.
''ಉದ್ಯೋಗ ಹೊಂದಿರುವ ಮತ್ತು ಆರ್ಥಿಕವಾಗಿ ಖರೀದಿಸಲು ಶಕ್ತರಾಗಿರುವ ಕುಟುಂಬಕ್ಕೆ ನಾವು ದಾನ ಮಾಡುವುದಿಲ್ಲ. ನಾವು ಅವರ ಆದಾಯವನ್ನು ನೋಡುತ್ತೇವೆ. ಕೆಲಸ ಕಳೆದುಕೊಂಡವರು, ಸಾಕಷ್ಟು ಆದಾಯ ಇಲ್ಲದೇ ಓರ್ವ ಪೋಷಕರು ಇಬ್ಬರು ಮಕ್ಕಳನ್ನು ಬೆಳೆಸುತ್ತಿದ್ದರೆ ಅವರಿಗೆ ಸಹಾಯ ಮಾಡುತ್ತೇವೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ದಾಯ್ಜಿವಲ್ಡ್ ಜೊತೆ ಮಾತನಾಡಿದ ಸುಚೇತಾ ವಿಕ್ರಮ್, "ನಾವು ಬೆಂಗಳೂರಿನಲ್ಲಿ ನಾಲ್ಕು ಫೋನ್ಗಳನ್ನು ಸಂಗ್ರಹಿಸಿದ್ದೇವೆ. ಇನ್ನೂ ಅದನ್ನು ದಾನ ಮಾಡಿಲ್ಲ. ಇನ್ನಷ್ಟು ಮೊಬೈಲ್ಗಳನ್ನು ಸಂಗ್ರಹ ಮಾಡಿ ದಾನ ಮಾಡುವ ನಿರ್ಧಾರ ಮಾಡಿದ್ದೇವೆ. ನಾವು ಅದನ್ನು ಉಜ್ವಲ್ ಎಂಬ ಶಾಲೆಗೆ ದಾನ ಮಾಡಲು ನಿರ್ಧರಿಸಿದ್ದೇವೆ. ಉಜ್ವಲ್ ಶಾಲೆಗೆ ಸಹಾಯದ ಅಗತ್ಯವಿದೆ. ಆದರೆ ಈಗ ಜನರ ಪ್ರತಿಕ್ರಿಯೆ ಉತ್ತಮವಾಗಿಲ್ಲ. ಈ ಅಭಿಯಾನ ತೀರಾ ನಿಧಾನವಾಗಿ ಸಾಗುತ್ತಿದೆ'' ಎಂದು ಹೇಳಿದ್ದಾರೆ.
ಇನ್ನು ಬಳಸಿದ ಸ್ಮಾರ್ಟ್ ಫೋನ್ಗಳನ್ನು ದಾನ ಮಾಡಲು ಬಯಸುವವರು ಅಮನ್ ಹಾಗೂ ಸುಚೇತಾ ಅವರನ್ನು ಸಂಪರ್ಕಿಸಬಹುದಾಗಿದೆ.
ಅಮನ್ ರೊಡ್ರಿಗಸ್: +91 8050884563 (ಮಂಗಳೂರು)
ಸುಚೇತಾ ವಿಕ್ರಮ್: +91 9980910055 (ಬೆಂಗಳೂರು)