ಉಡುಪಿ, ಆ. 16 (DaijiworldNews/MB) : "ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿದೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ನಾವು ಕೊರೊನಾ ಸೋಂಕಿನ ನಿಯಂತ್ರಣವನ್ನು ಕಳೆದುಕೊಂಡಿಲ್ಲ. ಬದಲಾಗಿ, ಪರೀಕ್ಷೆಯ ಪ್ರಮಾಣ ಹೆಚ್ಚಾದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಹೇಳಿದ್ದಾರೆ.
''ಆರಂಭದಲ್ಲಿ ನಾವು 500 ಜನರಿಗೆ ಪರೀಕ್ಷೆ ನಡೆಸುತ್ತಿದ್ದಾಗ ಈ ಪೈಕಿ 100 ಜನರಿಗೆ ಸೋಂಕು ಪಾಸಿಟಿವ್ ಆಗಿರುತ್ತಿತ್ತು. ಆದರೆ ಈಗ ನಾವು ಸಂಖ್ಯೆಯನ್ನು 2,500 ಕ್ಕೆ ಏರಿಸಿದ್ದೇವೆ. ಆದ್ದರಿಂದಾಗಿ ಸೋಂಕಿತರ ಸಂಖ್ಯೆಯೂ ಕೂಡಾ ಹೆಚ್ಚಳವಾಗಿದೆ. ಸೋಂಕು ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಿದ್ದೇವೆ'' ಎಂದು ತಿಳಿಸಿದ್ದಾರೆ.
"ಕಳೆದ ತಿಂಗಳು ಪಾಸಿಟಿವ್ ಪ್ರಕರಣಗಳು ಶೇ. 25 ರಷ್ಟಿದ್ದು ಈಗ ಅದು ಶೇ. 10 ಕ್ಕೆ ಇಳಿದಿದೆ. ಆ ಪ್ರಮಾಣವನ್ನು ಶೇ. 5% ಕ್ಕೆ ಇಳಿಸುವುದೇ ನಮ್ಮ ಗುರಿ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ'' ಎಂದು ಹೇಳಿದ್ದಾರೆ.
ಹಾಗೆಯೇ "ಕಳೆದ ತಿಂಗಳು ಶೇ.50 ಕ್ಕಿಂತ ಅಧಿಕ ಸೋಂಕಿತರಲ್ಲಿ ಕೊರೊನಾ ರೋಗಲಕ್ಷಣಗಳನ್ನು ಇದ್ದವು. ಆದರೆ ಈಗ ಶೇ. 10 ಕ್ಕೆ ಇಳಿದಿದೆ. ಐಸಿಯು ಹಾಗೂ ಆಮ್ಲಜನಕ ವ್ಯವಸ್ಥೆ ಸಾಕಷ್ಟು ಸಂಖ್ಯೆಯಲ್ಲಿದ್ದು ಜನರು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ'' ಎಂದು ತಿಳಿಸಿದ್ದಾರೆ.
"ಸರ್ಕಾರದ ಮಾರ್ಗಸೂಚಿ ಪ್ರಕಾರ, ಕೆಲಸದ ಪ್ರದೇಶ, ಕಚೇರಿಗಳು ಮತ್ತು ಕಾರ್ಖಾನೆಗಳನ್ನು ಸೀಲ್ಡೌನ್ ಮಾಡಲು ಸಾಧ್ಯವಿಲ್ಲ. ಬದಲಾಗಿ ನಾವು ಸ್ಥಳವನ್ನು ಸ್ಯಾನಿಟೈಸ್ ಮಾಡಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಕಡ್ಡಾಯವಾಗಿ ಕ್ಯಾರೆಂಟೈನ್ನಲ್ಲಿ ಇರಿಸುತ್ತೇವೆ. ಜಿಲ್ಲಾಡಳಿತವು ಈ ವಿಷಯದಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿಲ್ಲ" ಎಂದು ಸ್ಪಷ್ಟಪಡಿಸಿದರು.