ಕುಂದಾಪುರ, ಆ 11 (DaijiworldNews/HR): ಕುಂದಾಪುರ ತಾಲೂಕು ಪಂಚಾಯತಿಯ ನೂತನ ಅಧ್ಯಕ್ಷರಾಗಿ ಇಂದಿರಾ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಆ.11ರಂದು ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಇಂದಿರಾ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರಾಮ್ ಕಿಶನ್ ಹೆಗ್ಡೆ ಮುಂದುವರಿಯಲಿದ್ದಾರೆ. ಸಹಾಯಕ ಆಯುಕ್ತ ರಾಜು ಕೆ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ , ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಈ ಹಿಂದೆ ಒಟ್ಟು 37 ಸದಸ್ಯ ಬಲವಿದ್ದ ಕುಂದಾಪುರ ತಾಲೂಕು ಪಂಚಾಯಿತಿಯಲ್ಲಿ 14 ಸದಸ್ಯರು ಬೈಂದೂರು ತಾಲೂಕು ಪಂಚಾಯತಿಗೂ, ಒಬ್ಬರು ಹೆಬ್ರಿ ತಾಲೂಕು ಪಂಚಾಯತಿಗೂ ಸೇರಿರುವುದರಿಂದ ಕುಂದಾಪುರ ತಾಲೂಕು ಪಂಚಾಯತಿಯಲ್ಲಿ 22 ಸದಸ್ಯರಿದ್ದಾರೆ. 22 ಸದಸ್ಯರ ಪೈಕಿ 16 ಬಿಜೆಪಿ, 6 ಕಾಂಗ್ರೆಸ್ ಸದಸ್ಯರು ಇದ್ದಾರೆ.