ಉಡುಪಿ, ಆ. 11 (DaijiworldNews/MB) : ಸುಮಾರು 3 ಕೋಟಿಯಷ್ಟು ಹಣ ಜಿಲ್ಲಾಡಳಿತದ ಖಾತೆ ಯಲ್ಲಿದ್ದು ಇನ್ನು ಕೂಡಾ 10 ಕೋಟಿ ರೂ.ಯಷ್ಟು ಹಣವನ್ನು ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗೆ ತುರ್ತು ಕಾಮಗಾರಿಗಾಗಿ ಎನ್ಡಿಆರ್ಎಫ್ ಅಡಿಯಲ್ಲಿ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಗೃಹ ಸಚಿವ ಹಾಗು ಉಡುಪಿ ಉಸ್ತುವಾರಿ ಬಸವರಾಜು ಬೊಮ್ಮಾಯಿ ಅವರು ಹೇಳಿದರು.
ಮಂಗಳವಾರ ಪಡುಬಿದ್ರಿ ಬೀಚ್ನಲ್ಲಿ ಕಡಲ್ಕೊರೆತವನ್ನು ಪರಿಶೀಲಿಸಿದ ಅವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸಿದ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜ್ಯದ ಮುಖ್ಯ ಸಮಸ್ಯೆಯಾದ ಕಡಲ್ಕೊರೆತ ಹಾಗೂ ಭೂ ಕುಸಿತದ ಬಗ್ಗೆ ತಿಳಿಸಲಾಗಿದೆ. ಉಡುಪಿಯ ಕೆಲವು ಭಾಗಗಳು, ಕುಂದಾಪುರ ಬೈಂದೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ತೀವ್ರ ಹಾನಿ ಉಂಟಾಗಿದ್ದು ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಲ್ಲಿ ಚರ್ಚಿಸಲಾಗಿದೆ. ಸುಮಾರು ೩ ಕೋಟಿಯಷ್ಟು ಹಣ ಜಿಲ್ಲಾಡಳಿತದ ಖಾತೆ ಯಲ್ಲಿದ್ದು ಇನ್ನು ಕೂಡಾ ೧೦ ಕೋಟಿ ರೂ. ಯಷ್ಟು ಹಣವನ್ನು ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗೆ ತುರ್ತು ಕಾಮಗಾರಿಗಾಗಿ ಎನ್ಡಿಆರ್ಎಫ್ ಅಡಿಯಲ್ಲಿ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಹಾಗೆಯೇ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತದ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಶಾಶ್ವತ ಪರಿಹಾರದ ಬಗ್ಗೆ ಜಿಯೋಗ್ರಾಫಿಕಲ್ ಇಂಡಿಯಾದವರು ಒಂದು ಸರ್ವೇ ಮಾಡುವ ಬಗ್ಗೆಯೂ ಪ್ರಧಾನಿಯವರಲ್ಲಿ ಪ್ರಸ್ತಾಪ ಮಾಡಲಾಗಿದೆ. ನೆರೆ ಪೀಡಿತ ಹಾಗೂ ಭೂ ಸವೆತ ಸ್ಥಳಗಳಲ್ಲಿ ಶಾಶ್ವತ ಕ್ರಮ ಕೈಗೊಳ್ಳಲು ಜಿಯೊ ಮ್ಯಾಪಿಂಗ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಈ ಭಾರಿ ಸ್ವಾತಂತ್ರ್ಯೋತ್ಸವದಲ್ಲಿ ಯಾವುದೇ ಆಡಂಬರದ ಆಚರಣೆ, ಪೆರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಸಾರ್ವಜನಿಕರಿಗೂ ಪ್ರವೇಶವಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ದ್ವಜರೋಹಣ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಪಡುಬಿದ್ರಿ ಬೀಚ್ನಲ್ಲಿ ಕಡಲ್ಕೊರೆತವನ್ನು ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್ಪಿ ವಿಷ್ಣುವರ್ಧನ್, ಜಿ. ಪಂ. ಸಿಇಓ ಪ್ರೀತಿ ಗೆಹ್ಲೋಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್, ಜಿ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು ಉಪಸ್ಥಿತರಿದ್ದರು.