ಕುಂದಾಪುರ, ಆ 05 (DaijiworldNews/PY):ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜಾ ಸುಸಂದರ್ಭದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ಸವಿನೆನಪಿಗಾಗಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಅಮೂಲ್ಯವಾದ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಸುಮಾರು 500 ವರ್ಷಗಳಿಂದ ನಮ್ಮ ಹಿರಿಯರು ಶ್ರೀರಾಮ ಜನ್ಮಭೂಮಿಯನ್ನು ಹಿಂದೂಗಳ ಸ್ವಾಧೀನಕ್ಕೆ ನೀಡಬೇಕು ಎನ್ನುವ ನೆಲೆಯಲ್ಲಿ ಪ್ರಯತ್ನ ನೆಡಸುತ್ತಲೆ ಇದ್ದು, ಕಳೆದ ನೂರು ವರ್ಷಗಳಿಂದ ನ್ಯಾಯಾಲಯದ ಕಟಾಕಟೆಯಲ್ಲಿದ್ದ ಪ್ರಕರಣ ರಾಮಮಂದಿರವಿದ್ದ ಸ್ಥಳದ ಉತ್ಖನನದ ಮೂಲಕ ಸಾಕ್ಷ್ಯಧಾರಗಳ ದೊರಕಿ ಹಿಂದೂಗಳ ಸ್ವಾಧೀನಕ್ಕೆ ನೀಡುವಂತೆ ತೀರ್ಪು ಬಂದಿದೆ. ಬಾಬರಿ ಮಸೀದಿಗೆ 5 ಎಕರೆ ಸ್ಥಳವನ್ನು ಕಾದಿರಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಇವತ್ತು 161 ಅಡಿ ಎತ್ತರ, 300 ಅಡಿ ಉದ್ದ, 280 ಅಡಿ ಆಗಲದ ಶ್ರೀರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಬೆಳ್ಳಿಯ ಇಟ್ಟಿಗೆಯ ಮೂಲಕ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಸಹಸ್ರ ಸಹಸ್ರ ಹಿಂದೂಗಳ ಸಂಭ್ರಮದ ಕ್ಷಣ. ಶ್ರೀರಾಮ ಮಂದಿರ ನಿರ್ಮಾಣದಿಂದ ಸಮಸ್ತ ಜನತೆಗೆ ಒಳಿತಾಗುತ್ತದೆ ಎಂದರು.
1992ರಲ್ಲಿ ಶ್ರೀರಾಮ ಮಂದಿರ ಕರಸೇವೆಗೆ ನಮ್ಮ ತಾಲೂಕಿನಿಂದಲೂ ಸಾಕಷ್ಟು ಜನ ಹೋಗಿದ್ದಾರೆ. ಆವತ್ತು ಸಾಕಷ್ಟು ಕಷ್ಟಗಳನ್ನು ಅನುಭವಿಸಿ, ಶ್ರೀರಾಮನ ಸೇವೆ ಮಾಡಲು ತೆರಳಿ ಸುರಕ್ಷಿತವಾಗಿ ಹಿಂದೆ ಬಂದಿದ್ದಾರೆ. ಅವರ ಸೇವೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ 1992ರಲ್ಲಿ ಆಯೋಧ್ಯೆಗೆ ಕರಸೇವೆಗೆ ತೆರಳಿದ ರಾಧಾಕೃಷ್ಣ ಆಚಾರ್ಯ ಅವರನ್ನು ವಿಶೇಷವಾಗಿ ಅಪ್ಪಣ್ಣ ಹೆಗ್ಡೆಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಬಸ್ರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಗಾಣಿಗ, ಗ್ರಾ.ಪಂ.ಮಾಜಿ ಸದಸ್ಯ ಮಹೇಶ ಮೆಂಡನ್, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಾಕೇಶ, ಬಜರಂಗ ದಳ ಪ್ರಮುಖರಾದ ಸುಧೀರ್ ಮೇರ್ಡಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿಗಾರ್, ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್, ವಿ.ಹಿಂಪ ಪ್ರಮುಖರಾದ ಪ್ರದೀಪ್ ಜೋಗಿ, ಉಮೇಶ ಆಚಾರ್ಯ, ಅಶೋಕ ಕೆರೆಕಟ್ಟೆ, ದೇವಸ್ಥಾನದ ವ್ಯವಸ್ಥಾಪಕ ರವೀಂದ್ರ, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಮಹೇಶ್ ಹಟ್ಟಿಕುದ್ರು
ಮೊದಲಾದವರು ಉಪಸ್ಥಿತರಿದ್ದರು.