ಬೆಳ್ತಂಗಡಿ, ಆ 04(DaijiworldNews/HR): ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾಗಿದ್ದು, ಇದೀಗ ಮತ್ತೆ ಚುರುಕು ಪಡೆದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ನಿನ್ನೆ ರಾತ್ರಿ ಸುರಿದ ಜೋರು ಮಳೆಯಿಂದ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.
ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಭೂ ಕುಸಿತಗಳಾದ್ದು ಮೂಡಿಗೆರೆ ತಾಲೂಕಿಗೆ ಸೇರಿದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿತ ಉಂಟಾಗಿದೆ. ತಕ್ಷಣ ಮಣ್ಣನ್ನು ತೆರವುಗೊಳಿಸಲಾಗಿದೆ.
ಕಳೆದ ಆಗಸ್ಟ್ನ ಪ್ರಳಯವನ್ನು ನೆನಪಿಸುವಂತೆ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಭಾರೀ ಮಳೆಗೆ ರಾತ್ರಿಯಲ್ಲಿ ಮರವೊಂದು ಧರಶಾಹಿಯಾಗಿದ್ದು ಅದನ್ನು ತೆರವುಗೊಳಿಸಲಾಗಿದೆ. ಘಾಟಿ ರಸ್ತೆಯಲ್ಲಿ ಪ್ರಸ್ತುತ ರಾತ್ರಿ ವಾಹನ ಸಂಚಾರಕ್ಕೆ ನಿರ್ಬಂಧವಿರುವ ಹಿನ್ನೆಲೆಯಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.