ಉಡುಪಿ, ಜು. 31 (DaijiworldNews/SM): ಆಗಸ್ಟ್ 5ರಂದು ಬಹುನಿರೀಕ್ಷೆಯ ಅಯೊಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ. ಆದರೆ, ಈ ಕಾರ್ಯಕ್ರಮಕ್ಕೆ ಡಾ.ಪ್ರವೀಣ್ ಭಾಯಿ ತೊಗಾಡಿಯಾರನ್ನು ಆಹ್ವಾನಿಸದಿರುವುದು ಇದೀಘ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಉಡುಪಿಯಲ್ಲಿ ಮಾತನಾಡಿರುವ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರವೀಣ್ ಭಾಯಿ ತೊಗಾಡಿಯಾರನ್ನು ಹೊರಗೆ ಇಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಫಯಾಝ್ ಖಾನ್ ಎನ್ನುವ ವ್ಯಕ್ತಿಯನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿದೆ. ಆದರೆ, ಡಾ.ಪ್ರವೀಣ್ ಭಾಯಿ ತೊಗಾಡಿಯಾ ಅವರನ್ನು ಆಹ್ವಾನಿಸಿಲ್ಲ. ಇದು ಸರಿಯಾದ ನಿರ್ಧಾರ ಅಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.
ಡಾ.ಪ್ರವೀಣ್ ಭಾಯಿ ತೊಗಾಡಿಯಾ ಅವರು 32 ವರ್ಷ ಸ್ವಂತ ಸಂಸಾರ, ವೃತ್ತಿಯನ್ನು ತ್ಯಾಗ ಮಾಡಿದ ವ್ಯಕ್ತಿಯಾಗಿದ್ದಾರೆ. ಇಡೀ ದೇಶದಲ್ಲಿ ರಾಮಜನ್ಮ ಭೂಮಿಗಾಗಿ ಹೋರಾಟ ನಡೆಸಿದ್ದ ವ್ಯಕ್ತಿ ಅವರೇ ಆಗಿದ್ದಾರೆ. ಎಲ್ಲಾ ದ್ವೇಷಗಳನ್ನು ಮರೆತು ತೊಗಾಡಿಯ ಅವರನ್ನು ಶಿಲಾನ್ಯಾಸ ಕಾರ್ಯಕ್ಕೆ ಆಹ್ವಾನಿಸಬೇಕಿತ್ತು. ಇದು ಲಕ್ಷಾಂತರ ಹಿಂದೂಗಳ ಹೃದಯದ ತುಡಿತವಾಗಿದೆ. ಈಗಲೂ ಸಮಯ ಮೀರಿಲ್ಲ. ಸಂಬಂಧಪಟ್ಟವರು ಈ ಕುರಿತು ಚಿಂತಿಸಬೇಕಾಗಿದೆ. ತೊಗಾಡಿಯಾ ಅವರನ್ನು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನಿಸಲೇಬೇಕು ಎಂದು ಉಡುಪಿಯಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.