ಉಡುಪಿ, ಜು 31 (DaijiworldNews/PY): ಕೊರೊನಾ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಲ್ಲಿ, ತಕ್ಷಣವೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಜನರಿಗೆ ಮನವಿ ಮಾಡಿದ ಅವರು, ಕೊರೊನಾ ಲಕ್ಷಣವಿದ್ದರೂ ಕೂಡಾ ಮನೆಯಲ್ಲಿಯೇ ಇದ್ದು ಕೊನೆಗೆ ಆಸ್ಪತ್ರೆಗೆ ಪರೀಕ್ಷೆ ಬರುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿದ್ದವರಿಗೂ ಕೂಡಾ ಸೋಂಕುತಾಗುತ್ತದೆ. ಅಲ್ಲದೇ, ಸಾವಿನ ಪ್ರಮಾಣವೂ ಅಧಿಕವಾಗುತ್ತದೆ. ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಜ್ವರ ಕಂಡುಬಂದಲ್ಲಿ ಕಷಾಯ, ಮಾತ್ರೆ ಸೇವನೆಗೆ ಸೂಕ್ತವಾದ ಸಮಯವಲ್ಲ. ಬದಲಾಗಿ, ಶೀತ, ಜ್ವರ, ಗಂಟಲು ನೋವು, ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಬಗ್ಗೆ ಕಾರಣವನ್ನು ಪರಿಶೀಲನೆ ಮಾಡಿದ ಸಂದರ್ಭ, ಶ್ವಾಸಕೋಶ ಸಂಬಂಧಿ ಕಾಯಿಲೆ ಸೇರಿದಂತೆ ಕಿಡ್ನಿ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುವವರು ಹಾಗೂ ಹಿರಿಯ ನಾಗರಿಕರು ಸಾವನ್ನಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಸಮಸ್ಯೆ ಇರುವವರು ತಮ್ಮ ಆರೋಗ್ಯದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಅಲ್ಲದೇ, ಹಿರಿಯ ನಾಗರಿಕರೂ ಕೂಡಾ ತಮ್ಮ ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.