ಮಂಗಳೂರು, ಜು. 31 (DaijiworldNews/MB) : ಕೆ.ಪಿ.ಸಿ.ಸಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಅವರು ಜು.31ರ ಶುಕ್ರವಾರ ಜಿಲ್ಲೆಗೆ ಆಗಮಿಸಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 15 ಕಾಂಗ್ರೆಸ್ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಈ ವಿಚಾರಕ್ಕೆ ಹಾರೈಸುತ್ತೇನೆ. ಅವರು ಇಡೀ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿ. ಎಲ್ಲಾ 224 ಮಂದಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ಅವರು ಕೇವಲ 15 ಶಾಸಕರನ್ನು ಮಾತ್ರ ಯಾಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಬಿಜೆಪಿ ಎಷ್ಟು ಶಾಸಕರನ್ನಾದರೂ ತಮ್ಮ ಬಳಿ ಸೇರಿಸಿಕೊಳ್ಳಲಿ, ನಮ್ಮ ಗುರಿ ಪಕ್ಷ ಸಂಘಟನೆ. ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರೊಂದಿಗೆ ಇದೆ. ದೇಶಾದ್ಯಂತ ನಮ್ಮ ಕಾರ್ಯಕರ್ತರ ಸಹಾಯದಿಂದ ಪಕ್ಷವನ್ನು ನಿರ್ಮಿಸುತ್ತೇವೆ ಎಂದು ತಿರುಗೇಟು ನೀಡಿದರು.
ಕರ್ನಾಟಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ದಕ್ಷಿಣ ಕನ್ನಡಕ್ಕೆ ಇದು ನನ್ನ ಮೊದಲ ಭೇಟಿ. ದ.ಕ. ಅದ್ಭುತ ಜಿಲ್ಲೆಯಾಗಿದ್ದು ಈ ಸ್ಥಳವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹೆಸರುವಾಸಿಯಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗಿನಿಂದ ಕೊರೊನಾ ಕಾರಣದಿಂದ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ. ಈಗ ನನಗೆ ರಾಜಕೀಯಕ್ಕೆ ಉತ್ತೇಜನ ನೀಡಿದ, ಹಾಗೂ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಅವರ ಆಶೀರ್ವಾದ ಪಡೆಯಲು ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು.
ಬಳಿಕ ಶಿವಕುಮಾರ್ ಅವರು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಮನೆಗೆ ಭೇಟಿ ನೀಡಿದರು. ಬಿಷಪ್ ಶಿವಕುಮಾರ್ ಅವರಿಗೆ ಆತ್ಮೀಯ ಸ್ವಾಗತ ನೀಡಿ ಸನ್ಮಾನಿಸಿದರು.
ಕಾಂಗ್ರೆಸ್ ಹಲವಾರು ವರ್ಷಗಳಿಂದ ಮಹತ್ತರವಾದ ಕೆಲಸಗಳನ್ನು ಮಾಡುತ್ತಿದ್ದು ಅದನ್ನು ಮುಂದುವರೆಸಿದೆ. ನಿಮ್ಮ ಮುಂದಿನ ಕೆಲಸಗಳಿಗಾಗಿ ನಿಮಗೆ ಆಶೀರ್ವದಿಸುತ್ತೇನೆ, ಜನರ ಜೀವನ ಸುಧಾರಣೆಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಲ್ಲೇ ಇರಿ ಎಂದು ಬಿಷಪ್ ಹಾರೈಸಿದರು.
ನಂತರ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ಮಂಗಳೂರು ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆಸ್ಕರ್ ಅವರ ಪತ್ನಿ ಬ್ಲಾಸಂ ಫರ್ನಾಂಡೀಸ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಈ ಸಂದರ್ಭದಲ್ಲಿ ಇದ್ದರು.