ಮಂಗಳೂರು, ಜು. 31 (DaijiworldNews/MB) : ಮುಸ್ಲಿಮ್ ಸಮುದಾಯದ ಪ್ರಮುಖ ಹಬ್ಬವಾದ ಬಕ್ರೀದ್ನ್ನು ಕರಾವಳಿಯಲ್ಲಿ ಜುಲೈ 31 ರಂದು ಆಚರಿಸಲಾಗುತ್ತಿದ್ದು ಈ ವರ್ಷ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ.
ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೊರೊನಾ ಕಾರಣದಿಂದಾಗಿ ಈದ್ಗಾ ಮಸೀದಿ, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಆಚರಣೆ ಇಲ್ಲ ಎಂದು ಮಸೀದಿಯ ಅಧ್ಯಕ್ಷರಾದ ಹಾಜೀ ವೈ ಅಬ್ದುಲ್ಲ ಕುಂಞಿ ಈಗಾಗಲೇ ತಿಳಿಸಿದ್ದಾರೆ. ಸರ್ಕಾರವು ಕೊರೊನಾ ಕಾರಣದಿಂದ ಸರಳವಾಗಿ ಹಬ್ಬವನ್ನು ಆಚರಿಸುವಂತೆ ಮಾರ್ಗಸೂಚಿ ಹೊರಡಿಸಿದ್ದು ಈದ್ ಖುತ್ಬಾಕ್ಕೂ ನಿರ್ಬಂಧ ವಿಧಿಸಲಾಗಿದೆ.
ಬಕ್ರೀದ್ ಹಬ್ಬದ ಈ ದಿನದಂದು ಕುದ್ರೋಳೀಯ ನಡುಪಲ್ಲಿ ಮಸೀದಿಗೆ ಬಂದು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದು ಈ ವೇಳೆ ಎಲ್ಲರೂ ಮಾಸ್ಕ್ ಧರಿಸಿರುವುದು ಕಂಡು ಬಂದಿದೆ. ಹಾಗೆಯೇ ಸರ್ಕಾರದ ಸೂಚನೆಯಂತೆ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಲೈಟ್ಹಾಸ್ಹಿಲ್ನ ಈದ್ಗಾ ಪ್ರಾರ್ಥನಾ ಮೈದಾನದಲ್ಲಿ ವರ್ಷವೂ ಸಲ್ಲಿಸಲಾಗುತ್ತಿದ್ದ ನಮಾಝ್ ಪ್ರಾರ್ಥನೆ ಈ ವರ್ಷ ಸರ್ಕಾರದ ಆದೇಶದಂತೆ ನಿರ್ಬಂಧಿಸಲಾಗಿದ್ದು ಪ್ರಾರ್ಥನೆಗಳು ಇಲ್ಲದೆ ನಿರ್ಜನವಾಗಿದೆ.
ಇನ್ನು ಉಡುಪಿಯಲ್ಲೂ ಪವಿತ್ರ ಭಕ್ರೀದ್ ಆಚರಿಸಲಾಗಿದ್ದು ಸಾಮಾಜಿಕ ದೂರವನ್ನು ಕಾಪಾಡಿ ಸ್ಯಾನಿಟೈಝರ್ಗಳನ್ನು ಬಳಸುವ ಮೂಲಕ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಎಲ್ಲರೂ ಮಾಸ್ಕ್ ಧರಿಸಿರುವುದು ಕಂಡು ಬಂದಿದೆ.
ಮಸೀದಿಗಳಲ್ಲಿ ಸಾಮೂಹಿಕ ನಮಾಝ್ಗೆ ಸರ್ಕಾರ ಅವಕಾಶ ನೀಡಿದ್ದು 50 ಮಂದಿ ಮೀರದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು. ಅದಕ್ಕಿಂತಲೂ ಅಧಿಕ ಮಂದಿ ಬಂದಲ್ಲಿ ಬ್ಯಾಚ್ಗಳಾಗಿ ನಮಾಝ್ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಮಾಸ್ಕ್ ಹಾಗೂ 6 ಅಡಿ ಅಂತರ ಕಡ್ಡಾಯವಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 10ಕ್ಕಿಂತ ಕೆಳ ವಯಸ್ಸಿನ ಮಕ್ಕಳಿಗೆ ಮಸೀದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ಬೇರೆ ಯಾವುದೇ ಸ್ಥಳ, ಶಾದಿಮಹಲ್ಗಳಲ್ಲಿ ಸಾಮೂಹಿಕ ಸಮಾಝ್ ಏರ್ಪಡಿಸ ಬಾರದು ಎಂದು ತಿಳಿಸಿದೆ.
ಇನ್ನು ತಾಪಮಾನ ತಪಾಸಣೆ ಮಾಡಬೇಕು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಝರ್ಗಳಲ್ಲಿ ತೊಳೆಯಬೇಕು. ಮಸೀದಿಗಳಲ್ಲಿ ಇರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟಬಾರದು. ಮನೆಗಳಿಂದಲ್ಲೇ ಮುಸಲ್ಲಾವನ್ನು ತರಬೇಕು. ಹಸ್ತಲಾಘವ ಅಥವಾ ಆಲಿಂಗನ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇನ್ನು ಕರಾವಳಿ ಹೊರತುಪಡಿಸಿ ಉಳಿಡೆದೆ ನಾಳೆ ಆಗಸ್ಟ್ 1ರಂದು ಬಕ್ರೀದ್ ಆಚರಿಸಲಾಗುತ್ತದೆ.