ಮಂಗಳೂರು, ಜು. 31 (DaijiworldNews/MB) : ಹತ್ಯೆಗೀಡಾದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಸಹೋದರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ.
ನಾಲ್ಕು ವರ್ಷಗಳ ಹಿಂದೆ ವಿನಾಯಕ ಬಾಳಿಗಾ ಅವರ ಹತ್ಯೆಗೀಡಾಗಿದ್ದು ಇದೀಗ ಅವರ ಸಹೋದರಿ ಅನುರಾಧಾ ಬಾಳಿಗಾ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಹಾಕಲಾಗಿದೆ.
ಅನುರಾಧಾ ಬಾಳಿಗಾ ಅವರು ಇನ್ನೂ ಕೂಡಾ ತನ್ನ ಸಹೋದರನ ಸಾವಿಗೆ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ತನ್ನ 51 ವರ್ಷದ ಸಹೋದರ, ಆರ್ಟಿಐ ಕಾರ್ಯಕರ್ತನ ಹತ್ಯೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಕೋರಿದ್ದಾರೆ.
ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಅನುರಾಧಾ ಅವರಿಗೆ ಬೆದರಿಕೆ ದೂರವಾಣಿ ಕರೆಗಳು ಬಂದಿದೆ. ಈ ಹಿನ್ನೆಲೆಯಲ್ಲಿ "ದೇಶಪ್ರೇಮಿ ಸಂಘಟನೆಗಳ ಒಕ್ಕೂಟ, ಮಂಗಳೂರು" ವತಿಯಿಂದ ಬಾಳಿಗಾ ಮನೆಗೆ ಭೇಟಿ ನೀಡಿ ಧೃತಿಗೆಡದಂತೆ ಧೈರ್ಯ ತುಂಬಿದ್ದಾರೆ.
ನಿಯೋಗದಲ್ಲಿ ಒಕ್ಕೂಟದ ಪ್ರೊ. ನರೇಂದ್ರ ನಾಯಕ್, ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಪ್ರದೀಪ್ ಉರ್ವ, ಚೇತನ್ ಮತ್ತಿತರರು ಉಪಸ್ಥಿತರಿದ್ದರು.
ಮಾರ್ಚ್ 21, 2016 ರಂದು ಬಾಳಿಗಾ ಅವರ ಮನೆಯ ಬಳಿಯೇ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.