ಉಡುಪಿ, ಜು. 29 (DaijiworldNews/SM): ಉಡುಪಿ ಜಿಲ್ಲೆಗೆ ವಿದೇಶ, ಹೊರ ರಾಜ್ಯಗಳಿಂದ ಬಂದಿರುವ ವ್ಯಕ್ತಿಗಳು ಹಾಗೂ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳು 4 ದಿನಗಳ ಹೋಂ ಕ್ವಾರಂಟೈನ್ನಲ್ಲಿರುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿ ತಿರುಗಾಡಿದ್ದಲ್ಲಿ ಕಠಿಣಾ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೋಲೇಷನ್ ನಲ್ಲಿದ್ದುಕೊಂಡು ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ನಿಗಾ ಇಡಲು ತಂತ್ರಜ್ಞಾನದ ಬಳಕೆಯಾಗುತ್ತಿದ್ದು, ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡುತ್ತಿರುವ ವ್ಯಕ್ತಿಗಳ ಮಾಹಿತಿಯು ಲಭ್ಯವಾಗುತ್ತಿದೆ.
ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡುತ್ತಿರುವವರ ವಿರುದ್ದ ಅಧಿಕಾರಿಗಳು ಮನೆ ಭೇಟಿ ಮಾಡಿ ಎಚ್ಚರಿಕೆಯನ್ನು ಕೊಟ್ಟು ಹೊರಗಡೆ ತಿರುಗಾಟ ನಡೆಸದಂತೆ ಮನವರಿಕೆ ಮಾಡಿದರೂ, ನಿಯಮಗಳನ್ನು ಪಾಲಿಸದೇ ಉಲ್ಲಂಘನೆ ಮಾಡಿರುವ 69 ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸಲಾಗಿದೆ.
ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೋಲೇಶನ್ ನಲ್ಲಿರುವ ಯಾರೂ ಕೂಡಾ ಉಲ್ಲಂಘನೆ ಮಾಡಿ, ಹೊರಗಡೆ ತಿರುಗಾಡಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.