ಮಂಗಳೂರು, ಜು.29 (DaijiworldNews/SM): ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ವರ್ಗಾವಣೆ ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗುತ್ತಿದೆ. ಆಡಳಿತ ಪ್ರತಿ ಪಕ್ಷದ ನಾಯಕರು ಪರಸ್ಪರ ಮಾತಿನ ದಾಳಿಯನ್ನು ಮುಂದುವರೆಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ನೀಡಿದ್ದ ಹೇಳಿಕೆಗೆ ಖಾದರ್ ಮತ್ತೆ ತಿರುಗೇಟು ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ಯು.ಟಿ. ಖಾದರ್, ಜಿಲ್ಲಾಧಿಕಾರಿಗಳ ವರ್ಗಾವಣೆ ರಾಜಕೀಯ ಮೇಲಾಟ ಎಂದಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಇದು ಖಾದರ್ ಕಾಲವಲ್ಲ ಎಂದಿದ್ದರು. ಕಾಲ ಕಾಲದ ಸ್ವಾಭಾವಿಕ ಪ್ರಕ್ರಿಯೆಯಂತೆ ದ.ಕ. ಡಿಸಿ ವರ್ಗಾವಣೆ ಮಾಡಲಾಗಿದೆ. ಅದಕ್ಕೆ ರಾಜಕೀಯ ಲೇಪ ಬಳಿಯಬಾರದು ಎಂದಿದ್ದರು. ಯು.ಟಿ. ಖಾದರ್ ಕಾಲದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿತ್ತು. ಆದರೆ, ಇದು ಯು.ಟಿ. ಖಾದರ್ ಕಾಲ ಅಲ್ಲ ಎಂಬುವುದು ನೆನಪಿರಲಿ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಚಿವ ಖಾದರ್, ನಿಮ್ಮ "ಕಾಲ"ಗುಣ, ಬಂದ ಒಂದೇ ವರ್ಷದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳಿಗೆ ಅಪಮಾನವಾಗಿದೆ. ಇಬ್ಬರು ಜಿಲ್ಲಾಧಿಕಾರಿಗಳು ಅಪಮಾನಕ್ಕೀಡಾಗಿ ವಾಪಾಸ್ ಹೋಗಿದ್ದಾರೆ. ನಮ್ಮ ಕಾಲದಲ್ಲಿ ನಾನೇ ಅಧಿಕಾರ ಚಲಾಯಿಸಿದ್ದೆ. ಈಗ ಕಾಲ ನಿಮ್ಮದಿದ್ದರೂ ಅಧಿಕಾರ ಮಾತ್ರ ಬೇರೆಯವರ ಕೈಯಲ್ಲಿದೆಯಲ್ಲಾ ಎಂಬುವುದಾಗಿ, ಕೋಟಾ ಶ್ರೀನಿವಾಸ್ ಪೂಜಾರಿಗೆ ಶಾಸಕ ಯು.ಟಿ ಖಾದರ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.