ಮಂಗಳೂರು, ಜು 29 (DaijiworldNews/PY): ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ ಅವರು ಉಳ್ಳಾಲ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಒಂದು ವರ್ಷವಾದರೂ, ಅವರ ಆತ್ಮಹತ್ಯೆಯ ಹಿಂದಿನ ಕಾರಣಗಳು ಮಾತ್ರ ನಿಗೂಢವಾಗಿಯೇ ಉಳಿದಿವೆ.
ಕಳೆದ ವರ್ಷ ಜುಲೈ 29ರಂದು ಸಿದ್ದಾರ್ಥ ಅವರು ಮಂಗಳೂರಿಗೆ ಕಾರಿನಲ್ಲಿ ಬಂದಿದ್ದು, ಉಳ್ಳಾಲ ಸೇತುವೆ ಬಳಿ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದರು. ಅಲ್ಲದೇ, ಅವರು ನಾಪತ್ತೆಯಾಗುವ ಮುನ್ನ ಸೇತುವೆ ಮೇಲೆ ಒಬ್ಬಂಟಿಯಾಗಿ ನಡೆದಾಡಿದ್ದರು. ಜುಲೈ 31ರಂದು ಹೊಯ್ಗೆ ಬಜಾರ್ನಲ್ಲಿ ಅವರ ಶವ ಪತ್ತೆಯಾಗಿತ್ತು.
ಈ ಪ್ರಕರಣವನ್ನು ನಗರ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ತನಿಖಾ ತಂಡವು ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಆಗಸ್ಟ್ 26, 2019ರಂದು ಅಂತಿಮ ವರದಿಯನ್ನು ಸಲ್ಲಿಸಿತ್ತು. ಸಿದ್ದಾರ್ಥ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಆತ್ಮಹತ್ಯೆಯಿಂದಾಗಿ ಸಾವು ಸಂಭವಿಸಿದೆ ಎಂದು ವರದಿ ಹೇಳಿದೆ. ಆದರೆ, ಆತ್ಮಹತ್ಯೆ ಹಿಂದಿನ ಕಾರಣಗಳು ಇನ್ನೂ ಪತ್ತೆಯಾಗಿಲ್ಲ.
ಇದೀಗ ಈ ಸೇತುವೆ ಆತ್ಮಹತ್ಯೆ ತಾಣ ಎನ್ನುವ ಕುಖ್ಯಾತಿ ಗಳಿಸಿದ್ದು, ಸಿದ್ದಾರ್ಥ ಅವರ ಆತ್ಮಹತ್ಯೆಯ ಬಳಿಕ ಒಂದು ವರ್ಷದೊಳಗೆ ಎಂಟು ಮಂದಿ ಈ ಸೇತುವೆಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಸೇತುವೆಗೆ 8 ಲಕ್ಷ ರೂ.ಗಳ ವೆಚ್ಚದಲ್ಲಿ ರಕ್ಷಣಾತ್ಮಕ ಬೇಲಿಗಳನ್ನು ನಿರ್ಮಿಸಲಾಗುತ್ತಿದೆ.
ಸಿಬಿಐ ಡಿಐಜಿ ಅಶೋಕ್ ಕುಮಾರ್ ಮಲ್ಹೋತ್ರಾ ನೇತೃತ್ವದ ಸಮಿತಿಯು ತನಿಖೆ ನಡೆಸಿದ್ದು, ಸಿದ್ದಾರ್ಥ ಅವರು ಕೆಫೆ ಕಾಫಿ ಡೇ ಸಂಸ್ಥೆಯಿಂದ ಸುಮಾರು 3,535 ಕೋಟಿ ರೂ.ಗಳನ್ನು ತಮ್ಮ ಕಂಪೆನಿಗಳಿಗೆ ವರ್ಗಾಯಿಸಿರುವುದು ತಿಳಿದುಬಂದಿದೆ. ಆದಾಯ ತೆರಿಗೆ ಇಲಾಖೆ ಅವರಿಗೆ ಕಿರುಕುಳ ನೀಡಲಾಗಿತ್ತು ಎಂಬ ಆರೋಪದ ವಿಚಾರವಾಗಿ ಐಟಿ ಇಲಾಖೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾಗುವ ನಾಲ್ಕು ದಿನಗಳ ಮುಂಚೆ ಬರೆದಿದ್ದ ಪತ್ರದಲ್ಲಿ, "ಎಲ್ಲಾ ಹಣಕಾಸಿನ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿಯನ್ನು ತಾನು ಹೊಂದಿದ್ದು, ಈ ಬಗ್ಗೆ ಲೆಕ್ಕಪರಿಶೋಧಕರು ಅಥವಾ ಮಂಡಳಿಯ ಹಿರಿಯ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲ" ಎಂದು ಸಿದ್ದಾರ್ಥ ಅವರು ನಮೂದಿಸಿದ್ದರು.
ಸಿದ್ದಾರ್ಥ ಅವರ ಆತ್ಮಹತ್ಯೆಯ ಬಗ್ಗೆ ವಿವಿಧ ಆಯಾಮಗಳಿಂದ ಕೂಲಂಕುಶವಾಗಿ ತನಿಖೆ ಇನ್ನು ನಡೆಯಬೇಕಿದೆ. ಕಳೆದ ಡಿಸೆಂಬರ್ನಿಂದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಕರಣಗಳ ತನಿಖೆಗಾಗಿ ಪೊಲೀಸರು ನಿರತರಾಗಿದ್ದ ಕಾರಣ ಸಿದ್ದಾರ್ಥ ಅವರ ಸಾವಿನ ಬಗ್ಗೆ ಸೂಕ್ತವಾದ ಮಾಹಿತಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.