ಮಂಗಳೂರು, ಜು 29 (Daijiworld News/MSP): ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧು. ಬಿ ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ಬುಧವಾರ ಯುವಕನೋರ್ವನನ್ನು ಮೂಡಬಿದ್ರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೂಲಿ ಕಾರ್ಮಿಕನಾಗಿರುವ, ಮಿಜಾರು ನಿವಾಸಿ ರಂಜಿತ್(20) ಎಂದು ಗುರುತಿಸಲಾಗಿದೆ. ಜು.28 ರ ಸೋಮವಾರದಂದು ಗೋ ಸಾಗಾಟದ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ ಹಿನ್ನಲೆಯಲ್ಲಿ ವಾಟ್ಸ್ ಗ್ರೂಪ್ ಒಂದರಲ್ಲಿ ನಿಂದಿಸಿ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ವರದಿಯಾಗಿತ್ತು.
ಈ ಕುರಿತು ಜಿಲ್ಲಾಧಿಕಾರಿ ದೂರು ನೀಡಿಲ್ಲದಿದ್ದರೂ ಪೊಲೀಸ್ ಇಲಾಖೆಯೆ ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಇದಲ್ಲದೇ ದಿಡೀರ್ ಬೆಳವಣಿಗೆ ಎಂಬಂತೆ ಮಂಗಳವಾರದಂದು ಜಿಲ್ಲಾಧಿಕಾರಿ ಸಿಂಧು. ಬಿ ರೂಪೇಶ್ ಅವರನ್ನು ವರ್ಗಾವಣೆಗೊಳಿಸಿ ಅವರ ಸ್ಥಾನಕ್ಕೆ ಬೆಳಗಾವಿಯ ಜಿಲ್ಲಾ ಪಂಚಾಯತ್ ಸಿ.ಇ ಓ ಆಗಿದ್ದ ಡಾ. ರಾಜೇಂದ್ರ ಕೆ.ವಿ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.