ಕುಂದಾಪುರ, ಜು 28 (Daijiworld News/MSP): ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಮಾಂಸ ಮತ್ತು ಮೀನು ಉತ್ಪನ್ನಗಳ ತಯಾರಿಕಾ ಲಿಸಿಯಸ್ ಕಂಪೆನಿಯ ಮೂಲಕ ಕೋವಿಡ್-19ನಿಂದ ಸಂಕಷ್ಟಕ್ಕೆ ಸಿಲುಕಿರುವ ತ್ರಾಸಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮೀನುಗಾರಿಕೆಯನ್ನೆ ಅವಲಂಬಿಸಿರುವ 100 ಬಡ ಮೀನುಗಾರರ ಕುಟುಂಬಗಳಿಗೆ ಮಾಸ್ಕ್, ಸ್ಯಾನಿಟೈಸರ್ ಸಹಿತ 14 ವಸ್ತುಗಳನ್ನು ಒಳಗೊಂಡ ಕಿಟ್ನ್ನು ವಿತರಿಸಲಾಯಿತು.
ಲಿಸಿಯಸ್ ಕಂಪೆನಿಯ ಮೆನೇಜರ್ ರಾಘವೇಂದ್ರ ಶೆಟ್ಟಿ ಮಾತನಾಡಿ, ಲಿಸಿಯಸ್ ಕಂಪೆನಿ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಹೈದರಾಬಾದ್, ದೆಹಲಿ, ಗುರುಗ್ರಾಮ್, ಫರಿದಾಬಾದ್, ನೋಯ್ಡಾ, ಮುಂಬೈ, ಪುಣೆ, ಚೆನ್ನೈ ಮತ್ತು ಚಂಡೀಗಢಗಳಲ್ಲಿ ಕಛೇರಿಯನ್ನು ಹೊಂದಿದೆ. ಕೋವಿಡ್-19ನಿಂದಾಗಿ ಜನಜೀವನ ತತ್ತರವಾಗಿದ್ದು ಮೀನುಗಾರಿಕೆಯನ್ನೆ ನಂಬಿಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಮನಗಂಡು ಇಂದು 100 ಕುಟುಂಬಗಳಿಗೆ ಸಂಸ್ಥೆಯ ವತಿಯಿಂದ ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಲಿಸಿಯಸ್ ಕಂಪೆನಿಯ ಅಜಿತೇಶ್, ಹೊಸಾಡು ಗ್ರಾಮ ಪಂಚಾಯತ್ ಸದಸ್ಯ ಸುರೇಶ ಖಾರ್ವಿ, ಗಂಗೊಳ್ಳಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಾಧವ ಖಾರ್ವಿ ಕಂಚುಗೋಡು ಮೊದಲಾದವರು ಉಪಸ್ಥಿತರಿದ್ದರು