ಉಡುಪಿ, ಜು 28 (Daijiworld News/MSP): ಜಿಲ್ಲೆಯಲ್ಲಿ ಕೇವಲ ಕೊರೊನಾ ಕಾರಣದಿಂದ ಮೊದಲ ಸಾವು ಸಂಭವಿಸಿದೆ. ಇದಲ್ಲದೆ ಮತ್ತೆ ನಾಲ್ವರ ಸಾವು ಸಂಭವಿಸಿದ್ದು ಅವರೆಲ್ಲರಲ್ಲೂ ಸೋಂಕು ದೃಢಪಟ್ಟಿದೆ. ಈ ನಡುವೆ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಪಾಸಿಟಿವ್ ಪ್ರಕರಣಗಳಲ್ಲಿ 98% ಮಂದಿಯಲ್ಲಿ ಕೋವಿಡ್ ರೋಗ ಲಕ್ಷಣಗಳು ಕಾರಣದಿರುವುದು ಜಿಲ್ಲಾಡಳಿತವನ್ನು ಆತಂಕಕ್ಕೀಡು ಮಾಡಿದೆ.
ಕಾರ್ಕಳದ 60 ವರ್ಷದ ವ್ಯಕ್ತಿ ಸಾವು :ಕಾರ್ಕಳ ತಾಲೂಕಿನ 60 ವರ್ಷದ ವ್ಯಕ್ತಿಯನ್ನು ಕೋವಿಡ್ 19 ಲಕ್ಷಣಗಳೊಂದಿಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪಾಸಿಟಿವ್ ಬಂದ ಬಳಿಕ ಡಾ| ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಸೋಮವಾರ ಮೃತಪಟ್ಟಿದ್ದಾರೆ.ಅವರಲ್ಲಿ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ. ಆದ್ದರಿಂದ ಇದನ್ನು ಕೋವಿಡ್ 19 ಸೋಂಕಿನ ಲಕ್ಷಣದಿಂದ ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಸಾವು ಎಂದು ಪರಿಗಣಿಸಲಾಗಿದೆ.
ನೇಜಾರಿನ 44 ವರ್ಷದ ವ್ಯಕ್ತಿ ಸಾವು:ನೇಜಾರಿನ 44 ವರ್ಷದ ವ್ಯಕ್ತಿ ಹೃದ್ರೋಗ ಸಮಸ್ಯೆಯಿಂದ ಕಲ್ಯಾಣಪುರ ಆಸ್ಪತ್ರೆಗೆ ಸೇರಿದ್ದರು. ಆರೋಗ್ಯ ಸ್ಥಿತಿ ಗಂಭೀರವಿದ್ದ ಕಾರಣ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ನಿಧನ ಹೊಂದಿದರು. ಮೊದಲಿನ ಸಾಮಾನ್ಯ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಸಾವಿನ ಬಳಿಕ ಪರೀಕ್ಷಿಸಿದಾಗ ಪಾಸಿಟಿವ್ ವರದಿಯಾಗಿದೆ.
ಶಂಕರನಾರಾಯಣದ 45 ವರ್ಷದ ವ್ಯಕ್ತಿ ಸಾವು: ಕುಂದಾಪುರ ತಾಲೂಕು ಶಂಕರನಾರಾಯಣದ 45 ವರ್ಷದವರೊಬ್ಬರನ್ನು ಕುಂದಾಪುರ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಸೋಮವಾರ ಕರೆದುಕೊಂಡು ಬರುವಾಗ ಕೊನೆಯುಸಿರೆಳೆದರು. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿಯಾಗಿದೆ.
ಕುಂದಾಪುರದ 60 ವರ್ಷದ ವ್ಯಕ್ತಿ ಸಾವು:ಕುಂದಾಪುರ ಆಸ್ಪತ್ರೆಯಲ್ಲಿ 60 ವರ್ಷದವರೊಬ್ಬರನ್ನು ದಾಖಲಿಸಿಕೊಳ್ಳಲಾಗಿತ್ತು. ಐಸಿಯು ಬೆಡ್ಗಾಗಿ ಬ್ರಹ್ಮಾವರಕ್ಕೆ ಕರೆತರುವಾಗ ರವಿವಾರ ರಾತ್ರಿ ನಿಧನ ಹೊಂದಿದರು.
ಕುಂದಾಪುರದ 40 ವರ್ಷದ ವ್ಯಕ್ತಿ ಸಾವು: ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ 40 ವರ್ಷದ ವ್ಯಕ್ತಿ ಜು. 24ರಂದು ಬೆಂಗಳೂರಿನಿಂದ ಆಗಮಿಸಿದ್ದರು. ಬಳಿಕ ಜ್ವರ ಕಾಣಿಸಿಕೊಂಡಿತ್ತು. ರವಿವಾರ ಕೋವಿಡ್ 19 ಸೋಂಕು ದೃಢವಾಗಿದ್ದು, ಕೂಡಲೇ ಕುಂದಾಪುರದ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಮೃತಪಟ್ಟರು.
ಜಿಲ್ಲೆಯಲ್ಲಿ ಜುಲೈ 27 ರ ಸೋಮವಾರದವರೆಗೆ ಕೋವಿಡ್ ಶಂಕಿತರು, ಸಾರಿ ರೋಗಲಕ್ಷಣ ಹಾಗೂ , ಐಎಲ್ಐ ರೋಗಲಕ್ಷಣ ಒಟ್ಟು 42 ಮಂದಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚಿಗೆ 98% ಮಂದಿಯಲ್ಲಿ ಕೋವಿಡ್ ರೋಗ ಲಕ್ಷಣಗಳು ಕಾರಣದಿರುವುದು ಆತಂಕಕ್ಕೀಡು ಮಾಡಿದೆ. ಹಾಗಾಗಿ ಜನರು ಶ್ವಾಸಕೋಶಕ್ಕೆ ಸಂಬಂಧ ಪಟ್ಟವರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗು ಸಣ್ಣ ಲಕ್ಷಣಗಳು ಬಂದರೂ ಆರೋಗ್ಯ ತಪಾಸಣೆ ಮಾಡುವುದು ಉತ್ತಮ ಎಂದು ಅರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ